
ದಾವಣಗೆರೆ: ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳವನ್ನು ಖರೀದಿಸುವುದಾಗಿ ಸರ್ಕಾರ ಘೋಷಿಸಿದ ಮೂರು ದಿನಗಳಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ ₹ 250ರಿಂದ ₹ 300ರಷ್ಟು ದರ ಹೆಚ್ಚಳವಾಗಿದೆ.
15 ದಿನಗಳ ಹಿಂದೆ ಕ್ವಿಂಟಲ್ಗೆ ₹ 1,600ರಿಂದ ₹ 1,650 ಇದ್ದ ದರ ಶುಕ್ರವಾರ ₹ 1,850ರಿಂದ ₹ 1,950ರಕ್ಕೇರಿದೆ. ತಕ್ಷಣಕ್ಕೆ ಹಣ ಪಡೆದರೆ ಪ್ರತಿ ಕ್ವಿಂಟಲ್ಗೆ ₹ 1,850ರಿಂದ ₹1,890ರವರೆಗೆ ನೀಡಲಾಗುವುದು. 15 ದಿನ ಅಥವಾ ಒಂದು ತಿಂಗಳ ನಂತರ ಹಣ ಪಡೆದರೆ ಕ್ವಿಂಟಲ್ಗೆ ₹ 1,950 ನೀಡುವುದಾಗಿ ಖರೀದಿದಾರರು, ಮಧ್ಯವರ್ತಿಗಳು ರೈತರಿಗೆ ತಿಳಿಸುತ್ತಿದ್ದಾರೆ.
‘ದಾವಣಗೆರೆ, ಹಾವೇರಿ, ವಿಜಯಪುರ, ಬಾಗಲಕೋಟೆ, ಗದಗ, ವಿಜಯನಗರ, ಧಾರವಾಡ, ಬೆಳಗಾವಿ, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಈ ಎಲ್ಲ ಜಿಲ್ಲೆಗಳ ಮುಕ್ತ ಮಾರುಕಟ್ಟೆಯಲ್ಲಿ ಮೂರು ದಿನಗಳಲ್ಲಿ ಏಕರೂಪದಲ್ಲಿ ದರ ಹೆಚ್ಚಳವಾಗಿರುವುದು ಖಾಸಗಿ ಖರೀದಿದಾರರು ಮತ್ತು ಮಧ್ಯವರ್ತಿಗಳು ಮಾರುಕಟ್ಟೆ ಮೇಲೆ ಹಿಡಿತ ಹೊಂದಿರುವುದನ್ನು ತೋರುತ್ತದೆ’ ಎಂದು ರಾಜ್ಯ ರೈತ ಸಂಘದ ಹಾನಗಲ್ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಆರೋಪಿಸಿದ್ದಾರೆ.
‘ಅಕ್ಟೋಬರ್ ಎರಡನೇ ವಾರದಿಂದಲೇ ಮೆಕ್ಕೆಜೋಳದ ಕಟಾವು ಕಾರ್ಯ ನಡೆದಿದೆ. ನವೆಂಬರ್ನಿಂದ ಈವರೆಗೂ ಶೇ 60ರಷ್ಟು ಬಡ ರೈತರು ಮೆಕ್ಕೆಜೋಳವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದ್ದು, ಬೆಂಬಲ ಬೆಲೆ ದೊರೆಯದೇ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಬೆಂಬಲ ಬೆಲೆ ಅಡಿ ಖರೀದಿಸುವಲ್ಲಿ ವಿಳಂಬ ನೀತಿ ಅನುಸರಿಸಿದ್ದರಿಂದ ಮಧ್ಯವರ್ತಿಗಳಿಗೂ, ಖರೀದಿದಾರರಿಗೂ ಲಾಭವಾಗಿದೆ’ ಎಂದು ಅವರು ದೂರಿದ್ದಾರೆ.
‘ಈ ವರ್ಷ ಅತಿವೃಷ್ಟಿಯಿಂದ ಮೆಕ್ಕೆಜೋಳ ಇಳುವರಿ ನಷ್ಟವಾಗಿದ್ದು, ಪ್ರತಿ ಎಕರೆಗೆ ಕನಿಷ್ಠ 25ರಿಂದ ಗರಿಷ್ಠ 35 ಕ್ವಿಂಟಲ್ ಬದಲಿಗೆ ಕೇವಲ 12ರಿಂದ 15 ಕ್ವಿಂಟಲ್ ಇಳುವರಿ ದೊರೆತಿದೆ. ಆದರೂ ಸರ್ಕಾರ ಮೆಕ್ಕೆಜೋಳಕ್ಕೆ ಸಂಪೂರ್ಣ ನಷ್ಟ ಪರಿಹಾರ ಕೊಡದೆ ಪ್ರತಿ ಹೆಕ್ಟೇರ್ಗೆ ಗರಿಷ್ಠ ₹ 3,600 ನೀಡಿದೆ. ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಮೆಕ್ಕೆಜೋಳ ಬೆಳೆ ನಷ್ಟಕ್ಕೆ ಪರಿಹಾರವನ್ನೇ ನೀಡಿಲ್ಲ’ ಎಂದು ದಾವಣಗೆರೆ ತಾಲ್ಲೂಕಿನ ಹಳೆಬಾತಿ ಗ್ರಾಮದ ಮೆಕ್ಕೆಜೋಳ ಬೆಳೆಗಾರ ಬಿ.ಭೀಮಣ್ಣ ಹೇಳಿದ್ದಾರೆ.
‘ಮೆಕ್ಕೆಜೋಳ ಸೇರಿದಂತೆ ಯಾವುದೇ ಕೃಷಿ ಉತ್ಪನ್ನಗಳನ್ನು ಸರ್ಕಾರ ಬೆಂಬಲ ಬೆಲೆ ಅಡಿ ಖರೀದಿಸಿದರೆ ಮುಕ್ತ ಮಾರುಕಟ್ಟೆಯಲ್ಲಿ ಸಹಜವಾಗಿ ಉತ್ತಮ ದರ ದೊರೆಯುತ್ತದೆ. ಇಲ್ಲದಿದ್ದರೆ ಮಧ್ಯವರ್ತಿಗಳು, ಖಾಸಗಿ ಖರೀದಿದಾರರು ಮುಕ್ತ ಮಾರುಕಟ್ಟೆಯ ದರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಪ್ರತಿ ವರ್ಷವೂ ಸರ್ಕಾರ ಬೆಂಬಲ ಬೆಲೆ ಅಡಿ ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ದಾವಣಗೆರೆ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಕೆ. ಪರಮೇಶ್ ಆಗ್ರಹಿಸಿದ್ದಾರೆ.
‘ಸರ್ಕಾರ ಪ್ರತಿ ರೈತನಿಂದ ಬೆಂಬಲ ಬೆಲೆ ಯೋಜನೆ ಅಡಿ ಬರೀ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಮೊದಲು ತಿಳಿಸಿತ್ತು. ರೈತರ ಒತ್ತಾಯಕ್ಕೆ ಮಣಿದು ಈಗ 20 ಕ್ವಿಂಟಲ್ವರೆಗೆ ಖರೀದಿ ಮಾಡುವುದಾಗಿ ಹೇಳಿದೆ. ಕೆಲ ರೈತರು 25 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಕನಿಷ್ಠ 5 ಎಕರೆ (2 ಹೆಕ್ಟೇರ್) ಪರಿಗಣಿಸಿ 100 ಕ್ವಿಂಟಲ್ ಖರೀದಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗದಗ ಜಿಲ್ಲೆಯ ದುಂದೂರು ಗ್ರಾಮದ ರೈತ ಶ್ರೀನಿವಾಸ ಬಂಡಿ ಕೋರಿದ್ದಾರೆ.
‘ಒಬ್ಬ ರೈತನಿಂದ ಕೇವಲ 20 ಕ್ವಿಂಟಲ್ ಖರೀದಿಸಿದಲ್ಲಿ ಪ್ರಯೋಜನ ಆಗುವುದಿಲ್ಲ. ಪೂರ್ಣ ಮೆಕ್ಕೆಜೋಳ ಖರೀದಿಗೆ ಸರ್ಕಾರವನ್ನು ಆಗ್ರಹಿಸಿ ಹರಿಹರ ಮತ್ತು ಮೋಟೆಬೆನ್ನೂರು ನಡುವೆ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲಿದ್ದೇವೆ’ ಎಂದು ಮರಿಗೌಡ ಪಾಟೀಲ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.