ಮಲೇಬೆನ್ನೂರು: ‘ಹೊಲದಲ್ಲಿ ಕೆಲಸ ಮಾಡುವ ರೈತ ಹಾಗೂ ಗಡಿ ಕಾಯುವ ಯೋಧರಂತೆ ಕೆಲಸ ಮಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿ ನಿಶ್ಚಿತʼ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ದೇವರಬೆಳಕೆರೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂಗೋಧ್ಭವ ಮೂರ್ತಿ ಪ್ರತಿಷ್ಠಾಪನೆ, ಶಿವದೀಕ್ಷೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
‘ಜಂಗಮರಿಗೆ ಒಡವೆ, ವಸ್ತು ಶೋಭಾಯಮಾನವಲ್ಲ. ಧರ್ಮಧಿಕಾರಿಯಾಗಲು ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಸನಾತನ ಜ್ಯೋತಿಯು ಮನದೊಳಗಿನ ಅಂಧಕಾರ ದೂರ ಮಾಡುತ್ತದೆ’ ಎಂದರು.
ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಕರಿಬಸಪ್ಪ, ಗುರುಸ್ವಾಮಿ, ಕರಿಸಿದ್ದಯ್ಯ ಮಾತನಾಡಿದರು.
ಸುಭಾಶ್ಚಂದ್ರ ಶಾಸ್ತ್ರಿ, ರೇವಣಸಿದ್ದಯ್ಯ ಧಾರ್ಮಿಕ ವಿಧಿ ನೇತೃತ್ವ ವಹಿಸಿದ್ದರು. 35 ವಟುಗಳಿಗೆ ಜಂಗಮ ದೀಕ್ಷೆ ನೀಡಲಾಯಿತು.
ಗ್ರಾಮದ ದೇವತೆಗಳಾದ ಮೈಲಾರಲಿಂಗೇಶ್ವರ, ಬಸವೇಶ್ವರ ಹಾಗೂ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಜೊತೆ ವಿಶ್ವಾರಾಧ್ಯ ಮೂರ್ತಿ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.