ADVERTISEMENT

ಮಾಯಕೊಂಡ: ಕೇಂದ್ರ ಸ್ಥಾನದಲ್ಲಿಲ್ಲ ಶಾಸಕರ ಕಚೇರಿ

ಹೆಸರಿಗೆ ಮಾತ್ರ ವಿಧಾನಸಭೆ ಕ್ಷೇತ್ರ.. ಕೆಲಸವಾಗಬೇಕಿದ್ದರೆ ದಾವಣಗೆರೆಗೇ ಹೋಗಬೇಕು

​ಪ್ರಜಾವಾಣಿ ವಾರ್ತೆ
Published 16 ಮೇ 2025, 6:02 IST
Last Updated 16 ಮೇ 2025, 6:02 IST
ಮಾಯಕೊಂಡದಲ್ಲಿರುವ ಹಿರೇ ಮದಕರಿನಾಯಕರ ಸಮಾಧಿ ಸ್ಥಳ
ಮಾಯಕೊಂಡದಲ್ಲಿರುವ ಹಿರೇ ಮದಕರಿನಾಯಕರ ಸಮಾಧಿ ಸ್ಥಳ   

ಮಾಯಕೊಂಡ: ದಾವಣಗೆರೆ ತಾಲ್ಲೂಕಿನಲ್ಲಿರುವ ಮಾಯಕೊಂಡದ ಹೆಸರಲ್ಲಿ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು 47 ವರ್ಷಗಳು ಕಳೆದಿವೆ. ಹಾಲಿ ಶಾಸಕ ಕೆ.ಎಸ್‌. ಬಸವಂತಪ್ಪ ಅವರು ಚುನಾಯಿತರಾಗಿ ಎರಡು ವರ್ಷಗಳು ಈಚೆಗಷ್ಟೇ ಪೂರ್ಣಗೊಂಡಿವೆ. ಆದರೆ, ಈವರೆಗೂ ಈ ಕ್ಷೇತ್ರ ಪ್ರತಿನಿಧಿಸಿದ ಯಾವೊಬ್ಬ ಶಾಸಕರೂ ಕೇಂದ್ರ ಸ್ಥಾನದಲ್ಲಿ ‘ಜನಸಂಪರ್ಕ ಕಚೇರಿ’ ತೆರೆಯುವ ಗೋಜಿಗೆ ಹೋಗಿಲ್ಲ.

ಇದರಿಂದಾಗಿ ಮತದಾರರು ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಮಾಯಕೊಂಡದಿಂದ ದಾವಣಗೆರೆ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಕೊನೆಗೊಳ್ಳುವ ಸೂಚನೆಗಳೇ ದೊರೆಯುತ್ತಿಲ್ಲ.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಹೆಚ್ಚು ಹೋರಾಟಗಾರರನ್ನು ಮಾಯಕೊಂಡ ನೀಡಿದೆ. ಚಿತ್ರದುರ್ಗದ ಮದಕರಿ ನಾಯಕರ ಪಾಳೆಪಟ್ಟಿನ ಪ್ರಮುಖ ಕೇಂದ್ರವಾಗಿ ಈ ಊರು ಇತ್ತು. ಅಂತೆಯೇ 1978ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಕ್ಷೇತ್ರದ ಮೊದಲ ಶಾಸಕರಾಗಿ ನಾಗಮ್ಮ ಕೇಶವಮೂರ್ತಿ ಆಯ್ಕೆಯಾಗಿದ್ದರು. 2023ರಿಂದ ಬಸವಂತಪ್ಪ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

ADVERTISEMENT

1983ರಲ್ಲಿ ಕೆ.ಜಿ. ಮಹೇಶ್ವರಪ್ಪ, 1985ರಲ್ಲಿ ಕೆ. ಮಲ್ಲಪ್ಪ, 1989ರಲ್ಲಿ ಪುನಃ ನಾಗಮ್ಮ ಕೇಶವಮೂರ್ತಿ, 1994, 1999, 2004ರಲ್ಲಿ ಸತತವಾಗಿ ಎಸ್.ಎ. ರವೀಂದ್ರನಾಥ್, 2008ರಲ್ಲಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಮೊದಲ ಬಾರಿಗೆ ಎಂ.ಬಸವರಾಜ ನಾಯ್ಕ, 2013ರಲ್ಲಿ ಕೆ.ಶಿವಮೂರ್ತಿ ನಾಯ್ಕ, 2018ರಲ್ಲಿ ಪ್ರೊ.ಎನ್. ಲಿಂಗಣ್ಣ  ಆಯ್ಕೆಯಾಗಿದ್ದರು.

ಮತದಾರರ ಆಶಯ: ಇಲ್ಲಿನ ಶಾಸಕರು ಸರ್ಕಾರಿ ಕಚೇರಿಯೊಂದರಲ್ಲಿ ಜನಸಂಪರ್ಕ ಕಚೇರಿ ಹೊಂದಿ ತಿಂಗಳಲ್ಲಿ 2–3 ದಿನಗಳಾದರೂ ಜನರ ಭೇಟಿಗೆ ಲಭ್ಯವಾಗಿ ಸಾರ್ವಜನಿಕರ ಅಹವಾಲು ಆಲಿಸಿ, ಸಮಸ್ಯೆ ಪರಿಹಾರಿಸಬೇಕು. ಶಾಸಕರ ಕಚೇರಿ ತೆರೆದರೆ, ಜನರು ದಾವಣಗೆರೆ ನಗರಕ್ಕೆ ತೆರಳಿ ಅವರಿಗಾಗಿ ಕಾಯುವ ಕಷ್ಟ ತಪ್ಪಲಿದೆ ಎಂಬುದು ಮತದಾರ ಆಶಯ.

ಜನರು ಶಾಸಕರ ಮನೆಗೆ ಎಡತಾಕುವ ಬದಲು ಗ್ರಾಮದಲ್ಲಿ‌ನ ಪ್ರವಾಸಿ ಮಂದಿರವನ್ನೇ ತಾತ್ಕಾಲಿಕವಾಗಿ ಶಾಸಕರ ಕಚೇರಿಯಾಗಿ ಬಳಕೆ ಮಾಡಿಕೊಳ್ಳಬಹುದು. ನಂತರದ ದಿನಗಳಲ್ಲಿ ಜನಸಂಪರ್ಕ ಕೇಂದ್ರ ತೆರೆದು, ನಿರ್ವಹಣೆಗೆ ಸಿಬ್ಬಂದಿಯೊಬ್ಬರನ್ನು ನೇಮಿಸುವುದರಿಂದ ಹೋಬಳಿ ಹಾಗೂ ಅಕ್ಕಪಕ್ಕದ ಹೋಬಳಿ ವ್ಯಾಪ್ತಿಯ ಹಳ್ಳಿಗಳ ಜನತೆಗೂ ಸಹಕಾರಿಯಾಗಲಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ಶೀಘ್ರವೇ ಕಚೇರಿ:

ಈ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಶಾಸಕ ಕೆ.ಎಸ್. ಬಸವಂತಪ್ಪ‌ ಅವರನ್ನು ಸಂಪರ್ಕಿಸಿದಾ, ‘ಶೀಘ್ರವೇ ಉಪ ತಹಶೀಲ್ದಾರ್ ಕಚೇರಿ ಬಳಿ ಒಂದು ಕಟ್ಟಡ ನಿರ್ಮಿಸಿ, ಅಲ್ಲಿ ಶಾಸಕರ ಜನಸಂಪರ್ಕ ಕಚೇರಿ ತೆರೆದು ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.