ADVERTISEMENT

ಯೂರಿಯಾ ಕೊರತೆ: ದುಬಾರಿ ದರದ ಬರೆ

ಮಾರಾಟಗಾರರು, ಗೊಬ್ಬರ ಕಂಪನಿಗಳ ‘ಲಿಂಕ್ ದಂಧೆ’ ತಪ್ಪಿಸುವಂತೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:09 IST
Last Updated 22 ಜುಲೈ 2025, 5:09 IST
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಮೆಕ್ಕೆಜೋಳ ಬೆಳೆಗೆ ಯೂರಿಯಾ ಗೊಬ್ಬರ ಬಳಸುತ್ತಿರುವ ರೈತರು
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಮೆಕ್ಕೆಜೋಳ ಬೆಳೆಗೆ ಯೂರಿಯಾ ಗೊಬ್ಬರ ಬಳಸುತ್ತಿರುವ ರೈತರು   

ಮಾಯಕೊಂಡ: ಬಿತ್ತನೆ ಬೀಜ, ರಸಗೊಬ್ಬರ ದರದ ಏರಿಕೆಯ ನಡುವೆಯೂ ಸಾಲ ಮಾಡಿ ಬಿತ್ತನೆ ಮಾಡಿರುವ ರೈತರಿಗೆ ಈಗ ಯೂರಿಯಾ ಗೊಬ್ಬರ ಅಭಾವ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

‘ಈ ಬಾರಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಮುಂಗಾರು ಆರಂಭಕ್ಕೂ ಮುನ್ನ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಮುಗಿದಿದ್ದು, ಮೆಕ್ಕೆಜೋಳದ ಬೆಳೆ ತಿಂಗಳು ಪೂರೈಸುತ್ತಿದೆ. ಈ ವೇಳೆಯಲ್ಲಿ ಮೇಲು ಗೊಬ್ಬರವಾಗಿ ಯೂರಿಯಾ ಅಗತ್ಯವಾಗಿದೆ. ದಶಕಗಳಿಂದ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಇಂದಿಗೂ ಹರಳು‌ ಯೂರಿಯಾ ಬಳಸುತ್ತಾ ಬಂದಿದ್ದಾರೆ. ಈಗ ಇಲಾಖೆ ಅಧಿಕಾರಿಗಳೇ ಹರಳು ರೂಪದ ಯೂರಿಯಾ ಬಳಕೆ ಮಣ್ಣಿನ‌ ಆರೋಗ್ಯ ಹಾಳು ಮಾಡುತ್ತದೆ. ಅದಕ್ಕೆ ನ್ಯಾನೊ ಯೂರಿಯಾ ಬಳಸಿ ಎಂದು ಸಲಹೆ ನೀಡುತ್ತಿದ್ದಾರೆ. ಇದೀಗ ಮೇಲು ಗೊಬ್ಬರ ಯೂರಿಯಾ ಕೊರತೆ ಸೃಷ್ಟಿಯಾಗಿ ರೈತರಿಗೆ ಸಮಸ್ಯೆ ಎದುರಾಗಿದೆ.

ಯೂರಿಯಾ ಗೊಬ್ಬರದ ಜೊತೆಗೆ ಲಿಂಕ್ ಆಗಿ ಸಲ್ಫೇಟ್, ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ, ಆಲ್ 19 ಸೇರಿದಂತೆ ಇನ್ನೂ ಹಲವು ಬಗೆಯ ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂದು ಗೊಬ್ಬರದ ಅಂಗಡಿಯವರು ಹೇಳುತ್ತಾರೆ. ಇದೂ ಹೊರೆಯಾಗಿದೆ ಎಂಬುದು ರೈತರ ಅಳಲು.

ADVERTISEMENT

‘ನಿತ್ಯವೂ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಅಲೆದಾಟ ತಪ್ಪುತ್ತಿಲ್ಲ. ಈ ವೇಳೆಗೆ ಮೆಕ್ಕೆಜೋಳ ಬೆಳೆಗೆ ಅಗತ್ಯವಾಗಿ ಯೂರಿಯಾ ಬೇಕು ಇಲ್ಲವಾದಲ್ಲಿ ಬೆಳೆ ಶೀತ ಬಾಧೆಯಾಗಿ ಬೆಳವಣಿಗೆ ಕುಂಠಿತವಾಗಿ, ಇಳುವರಿ ಮೇಲೆ ತೀವ್ರ ಹೊಡೆತ ಬೀಳಲಿದೆ. ಶೀಘ್ರವೇ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡಿದರೆ ಮಾತ್ರ ಬೆಳೆ ಉಳಿಯುತ್ತವೆ’ ಎಂಬುದು ಗ್ರಾಮದ ರೈತರಾದ ಸಂತೋಷ, ಸಣ್ಣಪ್ಳ ಲೋಕೇಶ್, ರಘು, ಉಮೇಶ್ ಅವರ ಅಳಲು.

‘ಕೆಲವೆಡೆ ನಡೆದಿರುವ ಯುದ್ಧಗಳಿಂದಾಗಿ ರಸಗೊಬ್ಬರದ ಕಚ್ಚಾ ವಸ್ತುವಿನ ಕೊರತೆ ಉಂಟಾಗಿದೆ. ರೈತರು ನ್ಯಾನೊ ಯೂರಿಯಾ ಬಳಕೆಗೆ ಮುಂದಾಗಬೇಕು. ಜೊತೆಯಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆಯತ್ತ ಆಸಕ್ತಿ ತೋರಬೇಕಿದೆ. ಕೆಲ ಕಂಪನಿಗಳು ಯೂರಿಯಾ ಜೊತೆ ಕಡ್ಡಾಯವಾಗಿ ಲಿಂಕ್ ಹಾಕುತ್ತಿರುವುದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ನಿಯಂತ್ರಿಸುವ ಚರ್ಚೆಗಳು ನಡೆಯುತ್ತಿವೆ. ಹೆಚ್ಚು ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ರೈತರ ಅನುಕೂಲಕ್ಕೆ ಇಲಾಖೆ ಶ್ರಮಿಸುತ್ತಿದೆ’ ಎಂದು ದಾವಣಗೆರೆ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು.

ಜಿಯಾವುಲ್ಲಾ.ಕೆ ದಾವಣಗೆರೆ ಜಂಟಿ ಕೃಷಿ ನಿರ್ದೇಶಕ 
ಮಾಯಕೊಂಡ ರೈತ ಸಂಪರ್ಕ ಕೇಂದ್ರ

‘ಕಂಪನಿಗಳ ಲಿಂಕ್ ನಮಗೂ ದುಬಾರಿ’:

‘ಕಂಪನಿ‌ಯಿಂದ ಕಳುಹಿಸಿದ ಲಿಂಕ್ ಸಲ್ಫೇಟ್ ನ್ಯಾನೋ ಯೂರಿಯಾ ಡಿಎಪಿ ಆಲ್ 19 ಇನ್ನೂ ಹಲವನ್ನ ಕಡ್ಡಾಯವಾಗಿ ಖರೀದಿಸಲೇಬೇಕು ಇಲ್ಲದಿದ್ದರೆ ಗೊಬ್ಬರ ಇಲ್ಲ. ಎಂದು ಹೋಲ್‌ಸೇಲ್ ಡೀಲರ್‌ಗಳು ಹೆದರಿಸುತ್ತಾರೆ. ಒಂದು ಚೀಲ ಯೂರಿಯಾ ಅಂಗಡಿಗೆ ಬಿಲ್ ಆಗುವುದು ₹ 260ಕ್ಕೆ ₹ 27 ಬಾಡಿಗೆ ಮತ್ತು ಹಮಾಲಿ ₹ 5 ಸೇರಿ ₹ 300ಕ್ಕೂ ಹೆಚ್ಚು ಬೀಳುತ್ತಿದೆ. ಜೊತೆಗೆ ಲಿಂಕ್ ನಮಗೂ ದುಬಾರಿಯಾಗುತ್ತಿದೆ. ಇದನ್ನು ಅಧಿಕಾರಿಗಳು ಸರಿಪಡಿಸಿದರೆ ಮಾತ್ರ ನಮಗೂ ರೈತರಿಗೂ ಅನುಕೂಲ ಆಗುತ್ತದೆ ಎನ್ನುತ್ತಾರೆ’ ಹೆಸರು ಹೇಳಲಿಚ್ಛಿಸದ ಕೃಷಿ ಪರಿಕರ ಮಾರಾಟಗಾರರು. ರೈತರ ಆರೋಪ: ‘ಜಮೀನು ಹದ ಸೇರಿದಂತೆ ಬಿತ್ತನೆ ಬೀಜ ಗೊಬ್ಬರ ಹಾಗೂ ಬಿತ್ತನೆ ಕೂಲಿ ಎಂದು ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದೇವೆ. ಆದರೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ತಿಳಿದಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.