ದಾವಣಗೆರೆ: ವಿವಿಧ ಸಮಸ್ಯೆ ಎದುರಿಸುತ್ತಿರುವನಗರದ ಬೈಪಾಸ್ ರಸ್ತೆ ಪಕ್ಕದ ಬನಶಂಕರಿ ಬಡಾವಣೆಗೆ ಮೇಯರ್ ಅಜಯ್ಕುಮಾರ್ ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
‘ಬಡಾವಣೆಯನ್ನು ವಿಶೇಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದ್ದು, ಶೀಘ್ರ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ’ ಎಂದು ಅಜಯ್ಕುಮಾರ್ ಹೇಳಿದರು.
ಬನಶಂಕರಿ ಬಡಾವಣೆ ಶಾಮನೂರು ಹಾಗೂ ಶಿರಮನಗೊಂಡನಹಳ್ಳಿಯವರೆಗೆ ಹಬ್ಬಿದ್ದು, ಇದು ಎರಡನೇ ದಾವಣಗೆರೆ ಇದ್ದಂತೆ. ಬಡಾವಣೆಯಲ್ಲಿ ರಸ್ತೆಗಳ ಡಾಂಬರೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಬಡಾವಣೆಯ ಮೂರು ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಾಸಿಂಗ್ ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಾಣ, ಉದ್ಯಾನದ ಅಭಿವೃದ್ದಿ, ರಸ್ತೆಯ ಅಕ್ಕಪಕ್ಕ ಬೆಳೆದ ಗಿಡಗಳ ತೆರವು, ಒಳಚರಂಡಿ ದುರಸ್ತಿ, ಬಡಾವಣೆಯಲ್ಲಿನ ಕ್ರಾಸ್ಗಳಿಗೆ ನಾಮಫಲಕ ಹಾಕಿಸುವುದು ಸೇರಿ ಹಲವು ಅಭಿವೃದ್ಧಿ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಉಪ ಮೇಯರ್ ಸೌಮ್ಯಾ ನರೇಂದ್ರಕುಮಾರ್,ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಗೌರಮ್ಮ ಗಿರೀಶ್, ಜಯಮ್ಮ ಗೋಪಿನಾಯ್ಕ್, ಪಾಲಿಕೆ ಸದಸ್ಯರಾದ ನಾಗರಾಜ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಬಡಾವಣೆ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿ ಸ್ಥಳೀಯರು, ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.