
ಸಾಂದರ್ಭಿಕ ಚಿತ್ರ
ದಾವಣಗೆರೆ: ಈಚೆಗೆ ಒಬಜ್ಜಿಹಳ್ಳಿಯ ಬಳಿ ನಡೆದ ಪ್ಲಂಬರ್ ಕೊಲೆ ಪ್ರಕರಣ ಸಂಬಂಧ ಕೊಲೆ ನಡೆದ 48 ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್.ಪಿ.ಎಸ್.ನಗರದ ನಿವಾಸಿ ಮನೋಹರ್ ಪಿ.(25) ಬಂಧಿತ. ಅದೇ ಬಡಾವಣೆಯ ಸುದೀಪ (20) ಕೊಲೆಯಾದ ವ್ಯಕ್ತಿ. ‘ಇವರಿಬ್ಬರು ಸಂಬಂಧದಲ್ಲಿ ಮಾವ ಅಳಿಯಂದಿರು. ಮನೋಹರ್ ಅವರಿಂದ ಹಣ ಪಡೆದ ಸುದೀಪ ಅವರು ಹಣ ಕೊಡದೇ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ್, ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ನೇತೃತ್ವದಲ್ಲಿ ಠಾಣಾ ಪಿಎಸ್ಐ ಜೋವಿತ್ ರಾಜ್, ಎಎಸ್ಐ ನಾರಪ್ಪ, ಸಿಬ್ಬಂದಿ ಜಗದೀಶ್, ದೇವೇಂದ್ರನಾಯ್ಕ, ನಾಗಭೂಷಣ್, ಮಂಜುನಾಥ, ಅಣ್ಣಯ್ಯ, ಮಹೇಶ್, ವಿಶ್ವನಾಥ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ್ ಅವರನ್ನೊಳಗೊಂಡ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೇ 15ರಂದು ರಾತ್ರಿ ಮನೆಯಿಂದ ಬೈಕ್ ತೆಗೆದುಕೊಂಡು ಹೋದ ಪತಿಯನ್ನು ಒಬ್ಬಜ್ಜಿಹಳ್ಳಿ ಹತ್ತಿರ ರಸ್ತೆಯ ಬಳಿ ಕೊಲೆ ಮಾಡಿದ್ದಾರೆ ಎಂದು ಸುದೀಪ ಪತ್ನಿ ಭೂಮಿಕಾ ಅವರು ಮೇ 16ರಂದು ನೀಡಿದ್ದ ದೂರನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು.
ಕೊಲೆ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.