ADVERTISEMENT

ಎಗ್‌ರೈಸ್‌ ವ್ಯಾಪಾರಿ ಕೊಲೆ: ನಾಲ್ವರು ಆರೋಪಿಗಳ ಬಂಧನ

ರಾಗಿಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಕೊಲೆಗೆ ಸಂಚು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:32 IST
Last Updated 15 ಅಕ್ಟೋಬರ್ 2020, 16:32 IST
ಹನುಮಂತರಾಯ 
ಹನುಮಂತರಾಯ    

ದಾವಣಗೆರೆ: ಜಗಳೂರು ಪಟ್ಟಣದ ಹೊರವಲಯದ ಬಿದರಕೆರೆ ರಸ್ತೆಯಲ್ಲಿ ನಡೆದ ಎಗ್‌ರೈಸ್‌ ವ್ಯಾಪಾರಿ ಬಸವರಾಜಪ್ಪ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಬಸವರಾಜಪ್ಪನ ಪತ್ನಿ ಭಾಗ್ಯಮ್ಮ, ಜಗಳೂರು ತಾಲ್ಲೂಕಿನ ಗುಡ್ಡದನಿಂಗನಹಳ್ಳಿ ಗ್ರಾಮದ ಅಂಜಿನಪ್ಪ,
ಚೌಡಪ್ಪ,ಆಟೊ ಚಾಲಕಮಾರುತಿ ಅವರನ್ನು ಬಂಧಿಸಿದ್ದಾರೆ.

‘ಬಸವರಾಜಪ್ಪ ಅವರಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು. ಇದನ್ನು ಪತ್ನಿ ಭಾಗ್ಯಮ್ಮ ಪ್ರಶ್ನಿಸುತ್ತಿದ್ದರು. ಇದರಿಂದ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ನೊಂದ ಭಾಗ್ಯಮ್ಮ ಪತಿಯ ಕೊಲೆಗೆ ಯೋಜಿಸಿದ್ದರು. ಎಗ್‌ರೈಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜಿನಪ್ಪ, ಆಟೊ ಚಾಲಕ ಮಾರುತಿ, ಜೌಡಪ್ಪರಿಗೆ ಪತಿಯನ್ನು ಕೊಲೆ ಮಾಡಿದರೆ ₹ 1 ಲಕ್ಷ ಕೊಡುವುದಾಗಿ ಹೇಳಿ ಸಂಚು ರೂಪಿಸಿದ್ದರು’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಮಂಗಳವಾರ ರಾತ್ರಿ ಬಸವರಾಜಪ್ಪ ಎಗ್‌ರೈಸ್‌ ವ್ಯಾಪಾರ ಮುಗಿಸಿ ಮನೆಗೆ ಹೋಗಿದ್ದರು. ಕೊಲೆ ಸಂಚು ಹೂಡಿದ್ದ ಭಾಗ್ಯಮ್ಮ ಪತಿಗೆ ತಿಳಿಯದಂತೆ ರಾಗಿಮುದ್ದೆಯಲ್ಲಿ 10 ನಿದ್ರೆ ಮಾತ್ರೆ ಹಾಕಿದ್ದರು. ಊಟ ಮುಗಿಸಿ ಬಸವರಾಜಪ್ಪ ಗಾಢನಿದ್ದೆಗೆ ಜಾರಿದ್ದ. ಆಗ ಬಂದ ಅಂಜಿನಪ್ಪ ಆಟೊ ಚಾಲಕ ಮಾರುತಿ ಸಹಕಾರದಿಂದ ಬಸವರಾಜಪ್ಪನನ್ನು ಬಿದರಕೆರೆ ರಸ್ತೆಗೆ ಕರೆತಂದು ಅಲ್ಲಿಚೌಡಪ್ಪನೊಂದಿಗೆ ಸೇರಿ ಮಚ್ಚಿನಿಂದ ಬಸವರಾಜಪ್ಪನ ಕತ್ತು ಕೊಯ್ದು ಕೊಲೆ ಮಾಡಿದ್ದರು ಎಂದು ವಿವರಿಸಿದರು.

ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ಬಳಸಿದ ಮಚ್ಚು, ಆಟೊ ವಶಕ್ಕೆ ಪಡೆಯಲಾಗುವುದು.ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಸ್ಪಿ ಹನುಮಂತರಾಯ, ಎಎಸ್‌ಪಿ ರಾಜೀವ್‌ ಎಂ. ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ, ಸಿಪಿಐ ದುರುಗಪ್ಪ ತನಿಖೆ ನಡೆಸಿದ್ದರು. ಪಿಎಸ್ಐಗಳಾದ ಉಮೇಶ್ ಬಾಬು, ಶ್ರೀಧರ್, ಸಿಬ್ಬಂದಿ ರಾಘವೇಂದ್ರ, ಉಮೇಶ ಬಿಸ್ನಾಳ್ ತಂಡ ಶ್ವಾನದಳದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿತ್ತು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.