ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಬಳಿ ಇರುವ ಸೂಳೆಕೆರೆ ಗುಡ್ಡದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ.
ದಾವಣಗೆರೆ ತಾಲ್ಲೂಕಿನ ನಾಗರಕಟ್ಟೆ ತಾಂಡಾದ ಕೆ. ಚಂದ್ರನಾಯ್ಕ(25) ಕೊಲೆಯಾದವರು. ಹಣದ ವಿಚಾರಕ್ಕಾಗಿ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಚಂದ್ರನಾಯ್ಕ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಫಿನ್ಕೆರ್ ಫೈನಾನ್ಸ್ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ನಾಗರಕಟ್ಟೆ ತಾಂಡಾದ ಸಚಿನ್ನಾಯ್ಕನಿಗೆ ₹1.70 ಲಕ್ಷ ಸಾಲ ನೀಡಿದ್ದರು.
‘ಹಣ ಕೊಡುವುದಾಗಿ ಹೇಳಿ ನಾಗರಕಟ್ಟೆ ತಾಂಡಾದ ಸಚಿನ್ನಾಯ್ಕ ಹಾಗೂ ಈತನ ಚಿಕ್ಕಪ್ಪನ ಮಗ ಪುರುಷೋತ್ತಮನಾಯ್ಕ ಎಂಬುವರು ನನ್ನ ತಮ್ಮನನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿ ಒಂದು ವಾರ ಅಲ್ಲೇ ಇರಿಸಿಕೊಂಡಿದ್ದರೂ ಹಣ ನೀಡಿರಲಿಲ್ಲ. ಇದರಿಂದ ಬೇಸತ್ತು ಊರಿಗೆ ವಾಪಸ್ ಆಗಿದ್ದ. ಜುಲೈ 10ರಂದು ಕೆಲಸವಿದೆ ಎಂದು ಹೇಳಿ ಬೈಕ್ನಲ್ಲಿ ಹೋಗಿದ್ದು, ಈಗ ಶವವಾಗಿ ಪತ್ತೆಯಾಗಿದ್ದಾನೆ. ಈ ಇಬ್ಬರೇ ನನ್ನ ತಮ್ಮನ ಕೊಲೆ ಮಾಡಿದ್ದಾರೆ’ ಎಂದು ಮೃತನ ಸಹೋದರ ನಾಗರಾಜನಾಯ್ಕ ಬಸವಾಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ, ಬಸವಾಪಟ್ಟಣ ಠಾಣೆಯ ಎಸ್ಐ ಭಾರತಿ ಕಂಕಣವಾಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.