ADVERTISEMENT

ಬೆಸ್ಕಾಂ ಗುತ್ತಿಗೆದಾರನ ಕೊಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 4:39 IST
Last Updated 12 ಸೆಪ್ಟೆಂಬರ್ 2021, 4:39 IST
ಬಸವಾಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳು ಕೊಲೆಯಾದ ಜೈನುಲ್ಲಾಖಾನ್ ಅವರನ್ನು ಹೂತಿದ್ದ ಶವ ತೆಗೆಯಲು ಬಂದಾಗ ಸ್ಥಳದಲ್ಲಿ ಸೇರಿದ್ದ ಜನ ಸ್ತೋಮ
ಬಸವಾಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳು ಕೊಲೆಯಾದ ಜೈನುಲ್ಲಾಖಾನ್ ಅವರನ್ನು ಹೂತಿದ್ದ ಶವ ತೆಗೆಯಲು ಬಂದಾಗ ಸ್ಥಳದಲ್ಲಿ ಸೇರಿದ್ದ ಜನ ಸ್ತೋಮ   

ಬಸವಾಪಟ್ಟಣ: ಇಲ್ಲಿನ ಬೆಸ್ಕಾಂ ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಮುಖಂಡ ಜೈನುಲ್ಲಾ ಖಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.

ಅಮ್ಜದ್ ಖಾನ್ (44), ಇಸ್ಮಾಯಿಲ್ ಖಾನ್ (42) ನೂರ್ ಅಹ್ಮದ್ (36) ಬಂಧಿತ ಆರೋಪಿಗಳು.

ಪ್ರಕರಣದ ವಿವರ: ಜೈನುಲ್ಲಾಖಾನ್‌ ಸೆ.2ರಂದು ರಾತ್ರಿ ಊಟ ಮುಗಿಸಿ ವಾಯು ವಿಹಾರಕ್ಕೆಂದು ಹೋದವರು ನಾಪತ್ತೆಯಾಗಿದ್ದರು. ಅವರ ಪತ್ನಿ ಸಬ್ರಿನ್‌ಬಾನು ಮರುದಿನ ನೀಡಿದ ದೂರಿನಂತೆ ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜೈನುಲ್ಲಾಖಾನ್‌ ಅವರನ್ನು ಕೊಲೆ ಮಾಡಿ ಆರೋಪಿಗಳು ಬಸವಾಪಟ್ಟಣದ ಮಣ್ಣಲ್ಲಿ ಹೂತಿಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ADVERTISEMENT

ತನ್ನ ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಸಂಶಯದಿಂದ ಅಮ್ಜದ್‌ಖಾನ್‌ ತನ್ನ ಸಹೋದರ ಇಸ್ಮಾಯಿಲ್‌ ಖಾನ್‌ ಮತ್ತು ಸ್ನೇಹಿತ ನೂರ್‌ ಅಹ್ಮದ್‌ ಜತೆ ಸೇರಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಡಿವೈಎಸ್‌ಪಿ ಸಂತೋಷ್‌ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್‌ ವೃತ್ತ ನಿರೀಕ್ಷಕ ಮಹೇಶ್‌, ಬಸವಾಪಟ್ಟಣ ಎಸ್‌ಐ ಭಾರತಿ ಕಂಕಣವಾಡಿ ಮತ್ತು ತಂಡ ಪ್ರಕರಣವನ್ನು ಭೇದಿಸಿತ್ತು. ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್‌ ಫೋನ್‌ ಟವರ್‌ಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಸಿಬ್ಬಂದಿ ದೊಡ್ಡಬಸಪ್ಪ, ಬಸವರಾಜ ಕೋಟೆಪ್ಪನವರ್‌, ಮಂಜಾನಾಯ್ಕ, ರಾಜಾ ನಾಯ್ಕ್‌, ಶಂಕರಗೌಡ, ಅಂಜಿನಪ್ಪ, ಎಂ.ಆನಂದ್‌, ರವಿಕುಮಾರ್‌, ಇಬ್ರಾಹಿಂ, ರವಿ, ಸಂತೋಷ್‌ ಪತ್ತೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.