ADVERTISEMENT

ದಾವಣಗೆರೆ: ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 17:09 IST
Last Updated 18 ಜುಲೈ 2020, 17:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಪತಿಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಹರ ತಾಲ್ಲೂಕು ನಿಟ್ಟೂರು ಗರಾಮದ ಬಸಪ್ಪ ಅಲಿಯಾಸ್ ಬಸವರಾಜಪ್ಪ (38) ಕೊಲೆಯಾದವರು.

ಪತ್ನಿ ರೂಪಾ, ಅರುಣಕುಮಾರ, ಕಿರಣ್ ಹಾಗೂ ಕೋಟೆಮಲ್ಲೂರು ಗ್ರಾಮದ ಸಂತೋಷ್ ಎಂಬುವರನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ADVERTISEMENT

ಬಸಪ್ಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ‘ನನ್ನ ಪತಿಯ ಸಾವಿನ ಬಗ್ಗೆ ಅನುಮಾನವಿದೆ ತನಿಖೆ ಮಾಡಬೇಕು’ ಎಂದು ಪತ್ನಿ ರೂಪಾ ಜುಲೈ 14ರಂದು ಮಲೇಬೆನ್ನೂರು ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ‘ಬಸಪ್ಪ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದು, ಬಾಯಿಗೆ ಬಂದಂತೆ ಬೈಯುತ್ತಿದ್ದ ಎನ್ನುವ ವಿಚಾರಕ್ಕೆ ಕೊಲೆ ಮಾಡಿ ನೇಣು ಹಾಕಿದೆವು’ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ತಾಮ್ರದ್ವಜ, ಹರಿಹರ ಸಿಪಿಐ ಶಿವಪ್ರಸಾದ್, ಮಲೇಬೆನ್ನೂರು ಠಾಣೆ ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಕೆ.ಶಿವಕುಮಾರ್, ರಾಜಶೇಖರ್, ಟಿ.ಬಸವರಾಜ್, ಕಡೆಮನಿ ನಾಗಪ್ಪ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಎಸ್‌ಪಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್ ತಂಡವನ್ನು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.