ADVERTISEMENT

ನ.25ರಿಂದ ರಾಷ್ಟ್ರಮಟ್ಟದ ಕ್ರಿಕೆಟ್‌ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:28 IST
Last Updated 24 ನವೆಂಬರ್ 2020, 16:28 IST
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್– 2020 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಟಿ–ಶರ್ಟ್ ಬಿಡುಗಡೆ ಮಾಡಿದರು
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್– 2020 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಟಿ–ಶರ್ಟ್ ಬಿಡುಗಡೆ ಮಾಡಿದರು   

ದಾವಣಗೆರೆ: ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ 13ನೇ ಬಾರಿಗೆ ನಗರದಲ್ಲಿ ಏರ್ಪಡಿಸಿರುವ ಎಸ್.ಎಸ್. ಶಾಮನೂರು ಡೈಮಂಡ್, ಶಿವಗಂಗಾ ಕಪ್- ರಾಷ್ಟ್ರಮಟ್ಟದ ಟೆನಿಸ್ ಬಾಲ್ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಗೆ ನ.25ರಂದು ಸಂಜೆ 6ಕ್ಕೆ ಚಾಲನೆ ಸಿಗಲಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ 5 ದಿನಗಳ ಕಾಲ ನಡೆಯುವ ಟೂರ್ನಿಗೆ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡುವರು ಎಂದು ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕ್ರತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದ್ಯಮಿ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರವಿ ಇಳಂಗೋವ್, ದೇವರಮನೆ ಶಿವಕುಮಾರ, ನಿಟುವಳ್ಳಿ ಶೇಖರಪ್ಪ, ಉದಯ ಶಿವಕುಮಾರ, ರಾಜು ರೆಡ್ಡಿ, ಇಂದ್ರಪ್ಪ, ಮಹಾದೇವ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪಾಲ್ಗೊಳ್ಳುವರು. ಇದೇ ವೇಳೆ ಕ್ರೀಡಾ ಪ್ರೋತ್ಸಾಹಕರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಟೂರ್ನಿಯಲ್ಲಿ ಕೇರಳ, ಚೆನೈ, ಗೋವಾ, ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 24 ಆಹ್ವಾನಿತ ತಂಡಗಳು ಭಾಗವಹಿಸಲಿವೆ. 320 ಆಟಗಾರರಿಗೆ ಉಚಿತವಾಗಿ ಊಟ, ವಸತಿ ಮಾಡಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನ ₹ 3,55.555, ದ್ವಿತೀಯ ಬಹುಮಾನ ₹ 2,25,555 ಮತ್ತು ತೃತೀಯ ಬಹುಮಾನವಾಗಿ ₹ 1,25,555 ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು ಎಂದು ಹೇಳಿದರು.

ವೈಯಕ್ತಿಕ ಉತ್ತಮ ಆಲ್ ರೌಂಡರ್‌ಗೆ ಹೀರೊ ಹೊಂಡ ಬೈಕ್ ನೀಡಲಾಗುವುದು. ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಗ್ಯಾಲರಿ ವ್ಯವಸ್ಥೆ ಮಾಡಿದ್ದು, ಮೂರನೇ ತೀರ್ಪುಗಾರರ ವ್ಯವಸ್ಥೆ ಇರುತ್ತದೆ ಎಂದು ಅವರು ವಿವರಿಸಿದರು.

ಸುಮಾರು ₹ 30 ಲಕ್ಷ ಅಂದಾಜು ವೆಚ್ಚದಲ್ಲಿ ಟೂರ್ನಿ ಏರ್ಪಡಿಸಲಾಗುತ್ತಿದೆ. ಎಲ್ಲಾ ಪಂದ್ಯಾವಳಿಗಳೂ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಗೊಳ್ಳಲಿವೆ. 8 ಅಫಿಶಿಯಲ್ ಕಪ್ ಪಂದ್ಯಾವಳಿ ನಡೆಯಲಿದ್ದು, ಪೊಲೀಸ್, ಪತ್ರಕರ್ತರು, ವರ್ತಕರು, ಪಾಲಿಕೆ ಸದಸ್ಯರು, ವಕೀಲರ ತಂಡ ಭಾಗವಹಿಸಲಿವೆ. ಭಾಗವಹಿಸುವ ಎಲ್ಲಾ ಆಟಗಾರರಿಗೂ ಉಚಿತವಾಗಿ ಟೀ-ಶರ್ಟ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಜಯಪ್ರಕಾಶ ಗೌಡ, ಶಿವಗಂಗಾ ಶ್ರೀನಿವಾಸ, ರಂಗಸ್ವಾಮಿ, ಶಿವಕುಮಾರ, ಮಧು, ರಾಘವೇಂದ್ರ, ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.