ಹರಪನಹಳ್ಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ಗೊತ್ತುವಳಿ ವಿಫಲವಾಗಿದ್ದು, ಅಶೋಕ ಗೌಡ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಎಪಿಎಂಸಿ ಒಟ್ಟು 15 ಸದಸ್ಯ ಬಲ ಹೊಂದಿದೆ. ಇವರ ಪೈಕಿ ಅಧ್ಯಕ್ಷ ಅಶೋಕಗೌಡ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವಂತೆ 9 ಜನ ನಿರ್ದೇಶಕರು ಮನವಿ ಮಾಡಿದ್ದರು. ಈ ಗುಂಪಿನ 8 ಜನ ನಿರ್ದೇಶಕರು ಸೇರಿ 15 ಜನರು ಸಭೆಗೆ ಗೈರಾಗಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು. ಇದರಿಂದ ಬೇಸತ್ತ ನಿರ್ದೇಶಕ ಚಂದ್ರಶೇಖರಪ್ಪ ವೈಯಕ್ತಿಕ ಕಾರಣ ಹೇಳಿ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
14 ಜನ ನಿರ್ದೇಶಕರು ಕಾಂಗ್ರೆಸ್ ಬೆಂಬಲ ಪಡೆದು ಗೆಲುವು ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ನಿರ್ದೇಶಕರು ಒಬ್ಬರು ಮಾತ್ರ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತದಿಂದಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ವಿಫಲವಾಗಿದೆ. ಆಡಳಿತ ಮಂಡಳಿಯ ಉಳಿದ ಐದು ತಿಂಗಳ ಅವಧಿಯನ್ನು ಅಶೋಕಗೌಡ ಅವರೇ ಮುಂದುವರಿಸಲಿದ್ದಾರೆ.
ತಹಶೀಲ್ದಾರ್ ಎಲ್.ಎಂ. ನಂದೀಶ ಅವರು ಮಾತನಾಡಿ, ‘ಸಭೆಗೆ ಯಾವೊಬ್ಬ ಸದಸ್ಯರೂ ಹಾಜರಾಗದ ಕಾರಣ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷ ಅಶೋಕಗೌಡ ಮಾತನಾಡಿ, ‘ಅವಿಶ್ವಾಸ ಗೊತ್ತುವಳಿ ಸಭೆ ವಿಫಲವಾಗುವ ಮೂಲಕ ಮತ್ತೆ ನನಗೇ ಜಯ ದೊರಕಿದೆ. ಎಪಿಎಂಸಿ ಸರ್ವಾಂಗೀಣ ಪ್ರಗತಿಗೆ ಸರ್ವರ ಸಹಕಾರ ಬಯಸುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.