ಪ್ರಜಾವಾಣಿ ವಾರ್ತೆ
ಸಂತೇಬೆನ್ನೂರು: ಅಮೃತ್ ಮಹಲ್ ಕಾವಲು ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದು, ಶೀಘ್ರ ರೈತರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭರವಸೆ ನೀಡಿದರು.
ಸಮೀಪದ ಕುಳೇನೂರು ಗ್ರಾಮದಲ್ಲಿ ವಿಶೇಷ ಯೋಜನೆ ಅಡಿ ₹ 2.49 ಕೋಟಿ ವೆಚ್ಚದ ಸಂತೇಬೆನ್ನೂರು-ಕುಳೇನೂರು ಸಂಪರ್ಕ ಕಾಂಕ್ರೀಟ್ ರಸ್ತೆಯನ್ನುಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳಿಂದ ಸುಮಾರು 400 ಎಕರೆ ಜಮೀನನ್ನು ಶಿವಕುಳೇನೂರು ರೈತರು ಉಳುಮೆ ಮಾಡಿಕೊಂಡಿದ್ದರು. ಅಮೃತ ಮಹಲ್ ದಾಖಲೆ ಅಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯಿತು. ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಜಮೀನು ಉಳಿಸಿಕೊಡಲಾಯಿತು. ಶೀಘ್ರದಲ್ಲಿ ಕುಳೇನೂರು ಹಾಗೂ ಶಿವಕುಳೇನೂರುಗಳಲ್ಲಿ ಗ್ರಾಮ ಸಭೆ ನಡೆಸಿ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸಂತೇಬೆನ್ನೂರು- ಶಿವಕುಳೇನೂರು ಗ್ರಾಮದ ರಸ್ತೆಗೆ ₹ 2 ಕೋಟಿ ಮಂಜೂರು ಮಾಡಲಾಗಿದೆ. ಪ್ರಸಿದ್ಧ ಕುಳೇನೂರು ಸಿದ್ದಲಿಂಗೇಶ್ವರ ದೇಗುಲಕ್ಕೆ ₹ 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಸಿದ್ದಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಮುರುಗೇಂದ್ರಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ಪುರುಷೋತ್ತಮ, ಪುಟ್ಟಸ್ವಾಮಿ, ಹನುಮಂತಪ್ಪ, ಭೈರಪ್ಪ, ಬಿ.ಜೆ. ರಂಗಸ್ವಾಮಿ, ದೇವೇಂದ್ರಪ್ಪ, ಅಶೋಕ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಮೌಳಿ, ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಪಿಡಿಒ ಆಶಾ, ಆರ್ಐ ವಿಶ್ವನಾಥ್, ಟಿ.ಎನ್. ರೇವಣ್ಣ, ಗುತ್ತಿಗೆದಾರ ಹನುಮಂತಪ್ಪ ಅವರೂ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.