ADVERTISEMENT

ಸದಾಶಿವ ವರದಿ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:46 IST
Last Updated 4 ಸೆಪ್ಟೆಂಬರ್ 2021, 3:46 IST
ಒಳ ಮೀಸಲಾತಿ ಖಂಡಿಸಿ ನ್ಯಾಮತಿಯಲ್ಲಿ ಸದಾಶಿವ ಆಯೋಗ ವಿರೋಧ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಒಳ ಮೀಸಲಾತಿ ಖಂಡಿಸಿ ನ್ಯಾಮತಿಯಲ್ಲಿ ಸದಾಶಿವ ಆಯೋಗ ವಿರೋಧ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.   

ನ್ಯಾಮತಿ:ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಸದಾಶಿವ ಆಯೋಗ ವರದಿ ವಿರೋಧ ಹೋರಾಟ ಸಮಿತಿಯ ರಾಜ್ಯ ಸದಸ್ಯ ಡಾ. ಜಯದೇವ ನಾಯ್ಕ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸುರಹೊನ್ನೆ ಗ್ರಾಮದ ಬನಶಂಕರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮಹಾಂತೇಶ್ವರ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಸಾಗಿತು. ಬಳಿಕ ತಹಶೀಲ್ದಾರ್ ತನುಜಾ ಟಿ. ಸವದತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

‘ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಪ್ರಾಣ ಕೊಟ್ಟರೂ ವರದಿ ಅನುಷ್ಠಾನ ಮಾಡಲು ಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಂಜಾರ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ನಾಯ್ಕ, ‘ವರದಿ ಅನುಷ್ಠಾನವಾದರೆ ಶೋಷಿತ 101 ಸಮುದಾಯದವರಿಗೆ ಮರಣ ಶಾಸನವಾಗುತ್ತದೆ. ಯಾವುದೇ ಕಾರಣಕ್ಕೂ ವರದಿ ಜಾರಿ ಮಾಡಬಾರದು’ ಎಂದು ಒತ್ತಾಯಿಸಿದರು.

ಸಮಿತಿಯ ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಈಶ್ವರ ನಾಯ್ಕ, ಕೊರಚ ಸಮುದಾಯದ ಮುಖಂಡ ಗಂಗಾಧರಪ್ಪ, ಭೋವಿ ಸಮುದಾಯದ ಮುಖಂಡ ಸುರಹೊನ್ನೆ ನಾಗರಾಜಪ್ಪ, ಬಂಜಾರ ಸಮುದಾಯ ಮುಖಂಡ ಭೂಪಾಲನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಂ ನಾಯ್ಕ, ರುಕ್ಮಿಣಿಬಾಯಿ ಸಾಲಬಾಳು, ಕಾರನಾಯ್ಕ, ದೇವರಾಜು ಅರಸು, ತತ್ಯಾನಾಯ್ಕ, ರಾಮನಾಯ್ಕ, ಮಾರುತಿನಾಯ್ಕ, ಜುಂಜಾನಾಯ್ಕ, ಸುರೇಂದ್ರನಾಯ್ಕ, ಕೃಷ್ಣನಾಯ್ಕ ಸೇರಿ ಬಂಜಾರ, ಕೊರಚ, ಭೋವಿ ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.