ADVERTISEMENT

ಕೆಲಸ ಹುಡುಕಬೇಡಿ, ಉದ್ಯೋಗ ನೀಡಿ: ಪ್ರಮೋದ ನಾಯಕ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 15:23 IST
Last Updated 17 ಸೆಪ್ಟೆಂಬರ್ 2019, 15:23 IST
ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ರಾಯಲ್ ಮೆಕ್‌ ಫೋರಂ’ ಅನ್ನು ಕೇಂದ್ರೀಯ ತೆರಿಗೆ ಇಲಾಖೆ ದಾವಣಗೆರೆಯ ಸಹಾಯಕ ಆಯುಕ್ತ ಪ್ರಮೋದ ನಾಯಕ್‌ ಉದ್ಘಾಟಿಸಿದರು
ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ರಾಯಲ್ ಮೆಕ್‌ ಫೋರಂ’ ಅನ್ನು ಕೇಂದ್ರೀಯ ತೆರಿಗೆ ಇಲಾಖೆ ದಾವಣಗೆರೆಯ ಸಹಾಯಕ ಆಯುಕ್ತ ಪ್ರಮೋದ ನಾಯಕ್‌ ಉದ್ಘಾಟಿಸಿದರು   

ದಾವಣಗೆರೆ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡದೇ ಉದ್ಯೋಗ ನೀಡುವವರಾಗಬೇಕು ಎಂದು ಕೇಂದ್ರೀಯ ತೆರಿಗೆ ಇಲಾಖೆ ದಾವಣಗೆರೆಯ ಸಹಾಯಕ ಆಯುಕ್ತ ಪ್ರಮೋದ ನಾಯಕ್‌ ಸಲಹೆ ನೀಡಿದರು.

ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ರಾಯಲ್ ಮೆಕ್‌ ಫೋರಂ’ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ದಿನಗಳಲ್ಲಿ ಎರಡು ಬಗೆಯ ಸನ್ನಿವೇಶಗಳು ಇವೆ. ಕೇವಲ ಪುಸ್ತಕಗಳನ್ನು ಓದಿ ಎಂಜಿನಿಯರಿಂಗ್ ಪಾಸ್ ಮಾಡಿ ಉದ್ಯೋಗ ಪಡೆಯುವುದು ಒಂದು ಬಗೆಯಾದರೆ, ಲೇಖಕರ ಪುಸ್ತಕಗಳ‌ನ್ನು ಆಳವಾಗಿ ಅಧ್ಯಯನ ಮಾಡಿ, ಸಾಧನೆ ಮಾಡಿ ಇತರರಿಗೆ ಉದ್ಯೋಗ ನೀಡುವುದು ಮತ್ತೊಂದು ಬಗೆಯದು’ ಎಂದು ಹೇಳಿದರು.

ADVERTISEMENT

‘ಉದ್ಯೋಗ ನೀಡುವವರೇ ನಿಜವಾದ ಎಂಜಿನಿಯರ್‌ಗಳಾಗುತ್ತಾರೆ. ಇಂದಿನ ವಿದ್ಯಾರ್ಥಿಗಳು ಯಾವುದೋ ವಿಭಾಗದಲ್ಲಿ ಅಧ್ಯಯನ ಮಾಡಿ, ಮತ್ಯಾವುದೋ ವಿಭಾಗಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಆಗ ಉದ್ಯೋಗದಲ್ಲಿ ತೃಪ್ತಿ ಸಿಗುವುದಿಲ್ಲ. ನಾವು ಅಧ್ಯಯನ ಮಾಡಿದ ವಿಭಾಗದಲ್ಲೇ ಕೆಲಸ ಮಾಡಿದರೆ ಆಗ ಹೆಚ್ಚಿನ ಜ್ಞಾನ ಸಂಪಾದಿಸಬಹುದು’ ಎಂದರು.

‘ನಾವು ತಾಂತ್ರಿಕವಾಗಿ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಆ ತಾಂತ್ರಿಕತೆಯನ್ನು ಸಮಾಜಕ್ಕೆ ಹೇಗೆ ಬಳಸಬೇಕು ಎಂಬುದು ತಿಳಿದಿರುವುದಿಲ್ಲ. ತಂತ್ರಜ್ಞಾನ ಸಮಾಜಕ್ಕೆ ಉಪಯೋಗವಾದರೆ ಮಾತ್ರ ಅರ್ಥ ಬರುತ್ತದೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ ಮಾತನಾಡಿ, ‘ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅನ್ವೇಷಣೆಗಳಾಗದೇ ಬದಲಾವಣೆ ಸಾಧ್ಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ಸು ಪಡೆದರೆ ನೀವು ಸ್ಥಳೀಯ ವಿದ್ಯಾರ್ಥಿಗಳಾಗದೇ ರಾಷ್ಟ್ರೀಯ ವಿದ್ಯಾರ್ಥಿಗಳಾಗುತ್ತೀರಿ’ ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಎಸ್‌. ಕುಮಾರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.