ADVERTISEMENT

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆಗಾಗಿ ಈರುಳ್ಳಿ ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:56 IST
Last Updated 16 ಸೆಪ್ಟೆಂಬರ್ 2021, 7:56 IST
ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತೆ ಆಗ್ರಹಿಸಿ ಹಾಗೂ ಈರುಳ್ಳಿ ಬೆಲೆ ಕುಸಿತ ಖಂಡಿಸಿ ದಾವಣಗೆರೆಯ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಈರುಳ್ಳಿಯನ್ನು ನೆಲಕ್ಕೆ ಸುರಿಯುವ ಮೂಲಕ ಪ್ರತಿಭಟನೆ ನಡೆಸಿದರು
ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತೆ ಆಗ್ರಹಿಸಿ ಹಾಗೂ ಈರುಳ್ಳಿ ಬೆಲೆ ಕುಸಿತ ಖಂಡಿಸಿ ದಾವಣಗೆರೆಯ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಈರುಳ್ಳಿಯನ್ನು ನೆಲಕ್ಕೆ ಸುರಿಯುವ ಮೂಲಕ ಪ್ರತಿಭಟನೆ ನಡೆಸಿದರು   

ದಾವಣಗೆರೆ: ಕೇಂದ್ರ ಸರ್ಕಾರ ನಿಗದಿ ಮಾಡುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಕಾರ್ಯಕರ್ತರು ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.

ರೈತರ ಬೆಳೆಯುವ ಬೆಳೆಗಳಿಗೆ ಕೇಂದ್ರ ಸರ್ಕಾರ ನಿಗದಿ ಮಾಡುವ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನಿನ ಮಾನ್ಯತೆ ನೀಡಲು ಹಲವು ಬಾರಿ ಮನವಿ ಮಾಡಲಾಗಿದೆ. ಸರ್ಕಾರವು ಕಂಡು ಕಾಣದಂತೆ, ಕೇಳಿದರೂ ಕೇಳಿಸದಂತೆ
ಜಾಣತನ ಪ್ರದರ್ಶಿಸುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.

ರೈತ ಉತ್ಪನ್ನಗಳ ದರ ಕುಸಿಯಲು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯೇ ಕಾರಣವಾಗಿದೆ. ಈಗ ಕ್ವಿಂಟಲ್ ಈರುಳ್ಳಿಗೆ ₹ 800 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಇಂದು ಮಾರುಕಟ್ಟೆಯಲ್ಲಿ ರೈತರಿಂದ ದಲ್ಲಾಲರು, ವರ್ತಕರು ₹ 1ಕ್ಕೆ ಕೆಜಿಯಂತೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎಂಎಸ್‍ಪಿಗೆ ಸರ್ಕಾರ ಕಾನೂನಿನ ಮಾನ್ಯತೆ ನೀಡಿದ್ದರೆ ಕನಿಷ್ಠ ಕೆ.ಜಿ.ಗೆ ₹ 8 ಆದರೂ ಸಿಗುತ್ತಿತ್ತು ಎಂದು ಹೇಳಿದರು.

ADVERTISEMENT

ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳುವ ಕೇಂದ್ರ ಸರ್ಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಆಲೂರು ಪರಶುರಾಮ, ಬೂದಿಹಾಳ ಭಗತ್ ಸಿಂಹ, ಕಾಡಜ್ಜಿ ಪ್ರಕಾಶ,
ಹೂವಿನಮಡು ನಾಗರಾಜ, ಶಿರಗನಹಳ್ಳಿ ನಾಗರಾಜ, ಕೆಂಚನಹಳ್ಳಿ ಹನುಮಂತಪ್ಪ, ಕೋಲ್ಕುಂಟೆ ಹುಚ್ಚೆಂಗಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.