ದಾವಣಗೆರೆ: ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಗು ಪೋಷಣೆಗಾಗಿ ‘ತಾಯಿ ಮನೆ’ ತೆರೆಯಲಾಗಿದೆ. ಹಾಲುಣಿಸುವ ತಾಯಂದಿರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ತಾಯಿಮನೆಯಲ್ಲಿ ತೊಟ್ಟಿಲು, ಕುರ್ಚಿ, ಆಟಿಕೆಗಳನ್ನು ಇಡಲಾಗಿದೆ. ಮಗುವಿಗೆ ಹಾಲುಣಿಸುವುದಕ್ಕಾಗಿ ಕೊಠಡಿಯ ಮೂಲೆಯಿಂದರಲ್ಲಿ ಪರದೆ ಅಳವಡಿಸಿ, ಮಹಿಳೆಯರಿಗೆ ಖಾಸಗಿ ವಾತಾವರಣ ಕಲ್ಪಿಸಲಾಗಿದೆ.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಕೆಎಸ್ಆರ್ಟಿಸಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಕೆ.ಎನ್. ಇಂಗಳಿಕೆ ಅವರು ‘ತಾಯಿಮನೆ’ಯನ್ನು ಉದ್ಘಾಟಿಸಿದರು. ಈ ವೇಳೆ ದಾವಣಗೆರೆ ವಿಭಾಗೀಯಾ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದೂಸ್, ಡಿಪೊ ವ್ಯವಸ್ಥಾಪಕ ರಾಮಚಂದ್ರಪ್ಪ, ಡಿಎಂಒ ಜಗದೀಶ್, ಡಿಟಿಒ ಜಿ.ಬಿ. ಮಂಜುನಾಥ್ ಅವರೂ ಇದ್ದರು.
ಸುಲಭ್ ಇಂಟರ್ನ್ಯಾಷನಲ್ಗೆ ವಹಿಸಲು ಚಿಂತನೆ:ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಹ್ಲಾದಕರ ವಾತಾವರಣ ಇರಬೇಕು ಎಂಬುದೇ ಸಂಸ್ಥೆಯ ಉದ್ದೇಶ. ಆದರೆ, ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆ ಸಂಸ್ಥೆಗೆ ಕಷ್ಟವಾಗುತ್ತಿದೆ. ಟೆಂಡರ್ ಮೂಲಕ ನಿರ್ವಹಣೆಯನ್ನು ಗುತ್ತಿಗೆ ಕೊಡುತ್ತಿದ್ದೇವೆ. ಆದರೆ, ಗುತ್ತಿಗೆ ಪಡೆದವರು ಸರಿಯಾಗಿ ಸ್ವಚ್ಛತೆ ನೋಡಿಕೊಳ್ಳುತ್ತಿಲ್ಲ. ಹೀಗಾಗಿ ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆಗೆ ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೆ.ಎನ್. ಇಂಗಳಿಕೆ ತಿಳಿಸಿದರು.
ದಾವಣಗೆರೆ ವಿಭಾಗದಲ್ಲಿ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಸಾರಿಗೆ ಪಾಲು ಸಮಾನವಾಗಿದೆ. ಇನ್ನಷ್ಟು ಬಸ್ ಸಂಚಾರ ಏರ್ಪಡಿಸಿ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದರು.
ವಿಭಾಗದ ವ್ಯಾಪ್ತಿಯಲ್ಲಿ ದಾವಣಗೆರೆ, ಹರಿಹರ ಮತ್ತು ಹರಪನಹಳ್ಳಿ ಡಿಪೊಗಳಿದ್ದು, 375 ಬಸ್ಗಳು 355 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ. ಹಳೆಯ ಬಸ್ಗಳನ್ನು ಬದಲಾಯಿಸಿ, ಹೊಸ ಬಸ್ಗಳನ್ನು ಸೇವೆಗೆ ಒದಗಿಸುವ ಚಿಂತನೆಯಿದೆ. ಅಲ್ಲದೇ ‘ನಾನ್ ಎಸಿ ಸ್ಲೀಪರ್ ಬಸ್’ ಸೇವೆ ಹೆಚ್ಚಿಸುವ ಉದ್ದೇಶವಿದೆ ಎಂದೂ ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.