ದಾವಣಗೆರೆ: ಭೂ ಸುಧಾರಣೆ, ಎಪಿಎಂಸಿ ಸೇರಿ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿರೈತ ಸಂಘ ಹಾಗೂ ಹಸಿರು ಸೇನೆಯರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಾಲ್ಲೂಕಿನ ಕನಗೊಂಡನಹಳ್ಳಿ ಹಾಗೂ ಕುಕ್ಕವಾಡ ಗ್ರಾಮ ಪಂಚಾಯಿತಿಗಳ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಈ ಹಿಂದೆ ‘ಉಳುವವನೇ ಒಡೆಯ’ ಕಾಯ್ದೆಯಡಿ ರೈತರೇ ಭೂಮಿಯನ್ನು ಖರೀದಿ ಮಾಡಬೇಕು ಎಂದು ಇತ್ತು. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಉಳ್ಳವನೇ ಒಡೆಯ’ ಎಂಬಂತೆ ಶ್ರೀಮಂತರ ಪರವಾಗಿ ಕಾಯ್ದೆ ರೂಪಿಸಿವೆ. ಹಾಗಾದರೆ ರೈತರು ಸಾಕು ಪ್ರಾಣಿಗಳನ್ನು ಎಲ್ಲಿ ಸಾಕಬೇಕು ಎಂದು ರೈತರು ಪ್ರಶ್ನಿಸಿದರು.
‘ಎಪಿಎಂಸಿ ಕಾಯ್ದೆಯಡಿ ಹಲವು ವರ್ಷಗಳಿಂದ ಗುರುತು, ಪರಿಚಯವಿರುವವರ ಬಳಿ ರೈತರು ವ್ಯಾಪಾರ ಮಾಡುತ್ತಿದ್ದರು. ಈಗ ಬೇರೆ ಬೇರೆ ದೇಶಗಳ, ರಾಜ್ಯಗಳ ಶ್ರೀಮಂತರು ಆಹಾರ ಧಾನ್ಯ ವಹಿವಾಟು ಮಾಡಿದರೆ ರೈತರಿಗೆ ಅನ್ಯಾಯವಾದರೆ ಯಾರನ್ನು ಕೇಳಬೇಕು, ಸರ್ಕಾರವನ್ನೊ ಇಲ್ಲವೇ ವ್ಯಾಪಾರಿಗಳನ್ನೋ ಎಂಬುದು ರೈತರಿಗೆ ಗೊಂದಲವಾಗುತ್ತದೆ’ ಎಂದರು
‘ಸರ್ಕಾರ ರೈತರ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿತ್ತು. ಈಗ ವಿದ್ಯುತ್ ಅನ್ನು ಖಾಸಗೀಕರಣಗೊಳಿಸಿದರೆ ರೈತರು ಬೆಳೆಯುತ್ತಿದ್ದ ಆಹಾರ ಧಾನ್ಯಗಳ ಕೊರತೆ ಎದುರಾಗುತ್ತದೆ. ಅದ್ದರಿಂದ ಈ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಪ್ರಸಾದ್, ತಾಲ್ಲೂಕು ಅಧ್ಯಕ್ಷ ಮಾಯಕೊಂಡ ಲಿಂಗಣ್ಣ, ತಾಲ್ಲೂಕು ಕಾರ್ಯಾಧ್ಯಕ್ಷ ಬಲ್ಲೂರು ಪರಶುರಾಮರೆಡ್ಡಿ, ಪಾಮೇನಹಳ್ಳಿ ಲಿಂಗರಾಜ, ಕುಕ್ಕವಾಡ ರವಿಗೌಡ, ಬಸವನಗೌಡ್ರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.