ADVERTISEMENT

ದಾವಣಗೆರೆ | ಏ.28ರಂದು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ: ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 14:29 IST
Last Updated 24 ಏಪ್ರಿಲ್ 2024, 14:29 IST
ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಂದು ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ಹಂದರ ಕಂಬ ಪೂಜೆ ನೆರವೇರಿಸಲಾಯಿತು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಂದು ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ಹಂದರ ಕಂಬ ಪೂಜೆ ನೆರವೇರಿಸಲಾಯಿತು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದು, ನಗರದ ಹೈಸ್ಕೂಲ್ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಬುಧವಾರ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಹಂದರಗಂಬ ಪೂಜೆ ನಡೆಸಲಾಯಿತು.

‘ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ 5ನೇ ಬಾರಿ ಆಗಮಿಸುತ್ತಿದ್ದು, ಅವರು ಇಲ್ಲಿಗೆ ಬರುತ್ತಿರುವುದು ನಮ್ಮೆಲ್ಲರ ಪುಣ್ಯ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಜನರು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಸಂಸತ್ತಿಗೆ ಆಯ್ಕೆ ಮಾಡಿ
ಕಳುಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ದಾವಣಗೆರೆಗೆ ಸ್ಮಾರ್ಟ್ ಸಿಟಿ, ಪಾಸ್‌ಪೋರ್ಟ್ ಕಚೇರಿ, ಇಎಸ್‌ಐ ಆಸ್ಪತ್ರೆಗೆ ₹ 22 ಕೋಟಿ ನೀಡಿರುವುದು, ದಾವಣಗೆರೆ ರೈಲ್ವೆ ನಿಲ್ದಾಣ ನವೀಕರಣ, ರೈಲ್ವೆ ಹಳಿ ದ್ವಿಪಥ ಕಾಮಗಾರಿ, 6 ಪಥದ ರಸ್ತೆಯಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ. ಭಾರತದ ಸೈನ್ಯವನ್ನು ಬಲಪಡಿಸಿ ಸೈನಿಕರಿಗೆ ಬೆಂಬಲ ನೀಡಿದ್ದಾರೆ. ಅಭಿವೃದ್ಧಿಯಲ್ಲಿ 12ನೇ ಸ್ಥಾನ ಇದ್ದ ಭಾತರವನ್ನು 5ನೇ ಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ. 2047ಕ್ಕೆ ನಂಬರ್ 1 ದೇಶ ಆಗಬೇಕು ಎಂಬುದು ಪ್ರಧಾನಿ ಅವರ ಸಂಕಲ್ಪವಾಗಿದೆ’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ದಾವಣಗೆರೆ ಅಭಿವೃದ್ಧಿ ಮಾಡಿಲ್ಲ. ಚೊಂಬು ನೀಡಿದ್ದಾರೆ ಎಂಬ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ನವರು ಚೊಂಬು ಹಿಡಿದುಕೊಂಡು ಹೋಗಲಿ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಉತ್ಸಾಹ ಮೂಡಿಸಿದೆ. ಮಹಿಳೆಯರು, ಯುವಕರು, ವೈದ್ಯರು,  ವಕೀಲರು ಮುಂತಾದ ವರ್ಗದವರು ಭಾಗವಹಿಸಲಿದ್ದಾರೆ. ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮುಖಂಡರಾದ ಯಶವಂತರಾವ್ ಜಾಧವ್, ಶಿವನಳ್ಳಿ ರಮೇಶ್, ಕೃಷ್ಣಮೂರ್ತಿ ಪವಾರ್, ಧನಂಜಯ ಕಡ್ಲೇಬಾಳು, ಎಸ್.ಟಿ.ವೀರೇಶ್, ವೈ.ಮಲ್ಲೇಶ್, ಕೆ.ಆರ್.ಪ್ರಸನ್ನಕುಮಾರ್, ಕೊಳೇನಹಳ್ಳಿ ಸತೀಶ್, ಜಿ.ಎಸ್.ಅನಿತ್ ಕುಮಾರ್, ಶ್ಯಾಮ್, ಆರ್.ಎಲ್.ಶಿವಪ್ರಕಾಶ್, ಶಿವನಗೌಡ ಪಾಟೀಲ್, ಸಿದ್ದೇಶ್, ಪುಷ್ಪಾವಾಲಿ, ಭಾಗ್ಯ ಪಿಸಾಳೆ, ಚೇತನಾ ಶಿವಕುಮಾರ್, ಸವಿತಾ ರವಿಕುಮಾರ್ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.