ADVERTISEMENT

ಅವ್ಯವಹಾರ ತನಿಖೆಗೆ ಮುಂದಾಗಿದ್ದಕ್ಕೆ ರೋಹಿಣಿ ಸಿಂಧೂರಿ ವರ್ಗಾವಣೆ: ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 9:53 IST
Last Updated 24 ಸೆಪ್ಟೆಂಬರ್ 2019, 9:53 IST
ಎಚ್‌.ಕೆ. ರಾಮಚಂದ್ರಪ್ಪ
ಎಚ್‌.ಕೆ. ರಾಮಚಂದ್ರಪ್ಪ   

ದಾವಣಗೆರೆ: ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ₹ 200 ಕೋಟಿಗೂ ಹೆಚ್ಚಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿರುವ ಕಾರಣಕ್ಕೆ ಮಂಡಳಿಯ ಕಾರ್ಯದರ್ಶಿ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಆರೋಪಿಸಿದರು.

‘ಈ ಹಿಂದಿನ ಕಾರ್ಯದರ್ಶಿ ಅವಧಿಯಲ್ಲಿ ಪಾಕೆಟ್‌ ಹಾಗೂ ಗೋಡೆ ಕ್ಯಾಲೆಂಡರ್‌ಗಳನ್ನು ಮಾಡಿಸಲು ₹ 4 ಕೋಟಿ ಖರ್ಚು ಮಾಡಲಾಗಿತ್ತು. ಕಟ್ಟಡ ಕಾರ್ಮಿಕರಿಗೆ ಎಲ್‌ಪಿಜಿ ಸಿಲಿಂಡರ್‌, ಗ್ಯಾಸ್‌ ಸ್ಟೌವ್‌ ಕೊಡಲು 2017–18ನೇ ಸಾಲಿನಲ್ಲಿ ₹ 66 ಕೋಟಿ ವೆಚ್ಚ ಮಾಡಲಾಗಿದೆ. ಟ್ರೈನಿಂಗ್‌ ಹಾಗೂ ಟೂಲ್‌ ಕಿಟ್‌ ಕೊಡಲು ₹ 83.89 ಕೋಟಿ ಖರ್ಚು ಮಾಡಲಾಗಿತ್ತು. ಇವುಗಳಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದಿದ್ದರಿಂದ ತನಿಖೆ ನಡೆಸುವಂತೆ ರೋಹಿಣಿ ಸಿಂಧೂರಿ ಅವರನ್ನು ಕೋರಿದ್ದೆವು. ಅದಕ್ಕೆ ಅವರು ಒಪ್ಪಿಕೊಂಡು, ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದರು. ಆದರೆ, ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಕಾರ್ಮಿಕ ಮಂಡಳಿಯನ್ನು ಉಳಿಸಲು ರೋಹಿಣಿ ಸಿಂಧೂರಿ ಅವರನ್ನೇ ಕಾರ್ಯದರ್ಶಿಯನ್ನಾಗಿ ಮುಂದುವರಿಸಬೇಕು. ಇಲ್ಲವೇ ಬೇರೊಬ್ಬ ದಕ್ಷ ಅಧಿಕಾರಿಯನ್ನು ನೇಮಿಸಿ ಹಗರಣಗಳ ಬಗ್ಗೆ ತನಿಖೆ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು’ ಎಂದು ರಾಮಚಂದ್ರಪ್ಪ ಆಗ್ರಹಿಸಿದರು.

ADVERTISEMENT

* ನಿಷ್ಠಾವಂತ ಅಧಿಕಾರಿಗಳನ್ನು ಈ ರೀತಿ ವರ್ಗಾವಣೆ ಮಾಡುತ್ತ ಹೋದರೆ ಕಾರ್ಮಿಕ ಕಲ್ಯಾಣ ಮಂಡಳಿ ಉಳಿಯುವುದಿಲ್ಲ. ಕಾರ್ಮಿಕರಿಗೂ ನ್ಯಾಯ ಸಿಗುವುದಿಲ್ಲ.
– ಎಚ್‌.ಕೆ. ರಾಮಚಂದ್ರಪ್ಪ, ಕಾರ್ಮಿಕ ಮುಂಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.