ADVERTISEMENT

ಬಾಂಗ್ಲಾ ದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:11 IST
Last Updated 12 ಆಗಸ್ಟ್ 2024, 15:11 IST
ಹೊನ್ನಾಳಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು
ಹೊನ್ನಾಳಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು   

ಹೊನ್ನಾಳಿ: ‘ಬಾಂಗ್ಲಾ ದೇಶದಲ್ಲಿನ ಹಿಂದೂಗಳನ್ನು ಕೂಡಲೇ ರಕ್ಷಿಸಬೇಕು, ಅವರಿಗೆ ಜೀವಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಕಾರರು, ‘ಅರಾಜಕತೆಯ ಹಿನ್ನೆಲೆಯಲ್ಲಿ ಸಾಕಷ್ಟು ಗಲಭೆಗಳು ನಡೆಯುತ್ತಿವೆ. ಆ ಗಲಭೆಗಳಲ್ಲಿ ನಮ್ಮ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಕೋಮುವಾದಿಗಳು ಅತ್ಯಾಚಾರ, ಅನಾಚಾರ, ಕಗ್ಗೊಲೆಯಂತಹ ಭೀಕರ ಕೃತ್ಯಗಳಿಗೆ ಇಳಿದಿದ್ದಾರೆ’ ಎಂದು ದೂರಿದರು. 

‘ಬಹಳಷ್ಟು ಹಿಂದೂಗಳು ತಮ್ಮ ಪ್ರಾಣರಕ್ಷಣೆಗಾಗಿ ಬಾಂಗ್ಲಾ ದೇಶವನ್ನು ತೊರೆದು ಭಾರತದ ಗಡಿಯಲ್ಲಿ ತಮ್ಮ ಪ್ರಾಣ ಉಳಿಸಿ ಎಂದು ಮನವಿ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಲ್ಲಿನ ಹಿಂದೂಗಳ ರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ನಂತರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಶೀಲ್ದಾರ್ ಸುಭಾಷ್ ಅವರಿಗೆ ಮನವಿ ಸಲ್ಲಿಸಿದರು. 

ಸಂಘ ಪರಿವಾರದ ಪ್ರಮುಖರಾದ ಎಚ್.ಎಂ. ಅರುಣ್‌ಕುಮಾರ್, ಜಿತೇಂದ್ರ, ರಾಂಪುರ ಪ್ರವೀಣ್, ಟಿ.ಶ್ರೀನಿವಾಸ್, ವಕೀಲ ಎಸ್.ಎನ್. ಪ್ರಕಾಶ್, ಭರತ್ ಸತ್ತಿಗಿ, ಬಿಜೆಪಿ ಮುಖಂಡರಾದ ಎ.ಬಿ.ಹನುಮಂತಪ್ಪ, ಶಾಂತರಾಜ್ ಪಾಟೀಲ್, ಕೆ.ವಿ. ಚನ್ನಪ್ಪ, ಶಿವಾನಂದ್, ಎಂ.ಆರ್.ಮಹೇಶ್, ನ್ಯಾಮತಿ ರವಿಕುಮಾರ್, ಬಿಂಬಾ ಮಂಜುನಾಥ್, ಮಹೇಶ್ ಹುಡೇದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.