ADVERTISEMENT

ಕೊಲೆ ಆರೋಪಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 14:17 IST
Last Updated 10 ಮೇ 2019, 14:17 IST

ದಾವಣಗೆರೆ: ಹರಿಹರ ತಾಲ್ಲೂಕಿನ ದೊಗ್ಗಳ್ಳಿಯಲ್ಲಿ ಕಾಲುವೆ ನೀರು ಹರಿಸುವ ವಿವಾದ ವಿಕೋಪಕ್ಕೆ ಹೋಗಿ ಒಬ್ಬರನ್ನು ಹೊಡೆದು ಕೊಂದಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರನೇ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪಿತ್ತಿದೆ.

ದೊಗ್ಗಳ್ಳಿಯ ಬಸವರಾಜಪ್ಪ ಮತ್ತು ಮಾರುತಿ ಜೀವಾವಧಿ ಶಿಕ್ಷೆಗೆ ಒಳಗಾದವರು. ಅವರು ತಲಾ ₹ 37 ಸಾವಿರ ದಂಡ ಕಟ್ಟಬೇಕು. ಮೂರನೇ ಆರೋಪಿ ಗಣೇಶ್‌ಗೆ 3 ವರ್ಷ ಜೈಲು ಮತ್ತು ₹ 12 ಸಾವಿರ ದಂಡ ವಿಧಿಸಲಾಗಿದೆ.

2016ರ ಆ.29ರಂದು ಸಿದ್ದಪ್ಪ, ರೇಣುಕಪ್ಪ, ಕಿರಣ್‌, ಹೇಮಂತ್‌ ತಮ್ಮ ಜಮೀನಿನಲ್ಲಿದ್ದಾಗ ಬಸವರಾಜಪ್ಪ, ಮಾರುತಿ ಮತ್ತು ಗಣೇಶ್‌ ನೀರಿನ ವಿಚಾರವಾಗಿ ಸಿದ್ದಪ್ಪನ ಜತೆಗೆ ಜಗಳ ಆರಂಭಿಸಿದ್ದರು. ಸಲಾಕೆಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಈ ಕೊಲೆಗೆ ಹನುಮಂತಪ್ಪ, ಲಲಿತಮ್ಮ, ಗಂಗಮ್ಮ ಕುಮ್ಮಕ್ಕು ನೀಡಿದ್ದರು ಎಂದು ಸಿದ್ದಪ್ಪ ಅವರ ಸಹೋದರ ಚಂದ್ರಶೇಖರಪ್ಪ ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸಿಪಿಐ ಜೆ.ಎಸ್‌. ನ್ಯಾಮಗೌಡರ್‌ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ADVERTISEMENT

ನ್ಯಾಯಾಧೀಶ ಕೆಂಗಬಾಲಯ್ಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ. ಹನುಮಂತಪ್ಪ, ಲಲಿತಮ್ಮ, ಗಂಗಮ್ಮ ಕುಮ್ಮಕ್ಕು ನೀಡಿರುವುದು ಸಾಬೀತು ಆಗದೇ ಇರುವುದರಿಂದ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.