ದಾವಣಗೆರೆ: ಲೋಕಿಕೆರೆಯಲ್ಲಿ ಸೋಮವಾರ ಮನೆಗೆ ಸಿಡಿಲು ಬಡಿದಿದ್ದು, ಮನೆಯೊಳಗಿದ್ದವರು ಜೀವಾಪಾಯದಿಂದ ಪಾರಾಗಿದ್ದಾರೆ. ಬಾಲಕೊಬ್ಬನಿಗೆ ಗಾಯಗಳಾಗಿವೆ.
ಲೋಕಿಕೆರೆ ಮಾಲತೇಶ್(40) ಅವರ ಪತ್ನಿ ಜಯಲಕ್ಷ್ಮೀ(36), ಮಗಳು ವರ್ಷಿಣಿ(16), ಮಗ ಜೀವನ್ (8) ಹಾಗೂ ಅಜ್ಜಿ ಪಾರ್ವತಮ್ಮ(85) ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಸೋಮವಾರ ಮುಂಜಾನೆ 5 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿದೆ. ವಿದ್ಯುತ್ ವಯರ್ಗಳು ಹೊತ್ತಿಕೊಂಡಿದ್ದರಿಂದ ಮನೆತುಂಬಾ ಹೊಗೆ ತುಂಬಿದೆ. ಕೂಡಲೇ ಈ ಕುಟುಂಬ ಮನೆಯಿಂದ ಹೊರಗೆ ಬಂದಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜೀವನ್ ಎಂಬ ಹುಡುಗನನ್ನು ಬಾಪೂಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಉಳಿದವರಿಗೆ ತೊಂದರೆಯಾಗಿಲ್ಲ.
ಫ್ರಿಜ್ಜ್, ಟಿ.ವಿ. ಚಾರ್ಜರ್, ಮೀಟರ್, ಸ್ವಿಚ್ಬೋರ್ಡ್ಗಳು ಸುಟ್ಟು ಹೋಗಿವೆ. ಮನೆಯ ಗೋಡೆ, ಬಾಗಿಲು, ಕಡಪದ ಕಲ್ಲುಗಳು ಬಿರುಕುಬಿಟ್ಟಿವೆ. ಸುಮಾರು ₹ 1 ಲಕ್ಷ ನಷ್ಟ ಉಂಟಾಗಿರಬಹುದು ಎಂದು ಅವರ ಸಂಬಂಧಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ಕಂದಾಯ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.