ADVERTISEMENT

ಮಲೇಬೆನ್ನೂರು| ಭತ್ತದ ಒಣಹುಲ್ಲಿಗೆ ಬೇಡಿಕೆ ಸೃಷ್ಟಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:01 IST
Last Updated 24 ಮೇ 2025, 14:01 IST
ಮಲೇಬೆನ್ನೂರು ಪಟ್ಟಣದ ಮೂಲಕ ಶನಿವಾರ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್‌ ಮೂಲಕ ಸಾಗಣೆ ಮಾಡುತ್ತಿರುವುದು
ಮಲೇಬೆನ್ನೂರು ಪಟ್ಟಣದ ಮೂಲಕ ಶನಿವಾರ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್‌ ಮೂಲಕ ಸಾಗಣೆ ಮಾಡುತ್ತಿರುವುದು   

ಮಲೇಬೆನ್ನೂರು: ಮುಂಗಾರಿಗೂ ಮುನ್ನ ಅಧಿಕ ಮಳೆ ಸುರಿಯುತ್ತಿರುವ ಕಾರಣ, ಒಣ ಹುಲ್ಲಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಕೃಷಿಕರು ಬೇಸಿಗೆ ಹಂಗಾಮಿನನಲ್ಲಿ ಭತ್ತದ ಕಟಾವಿನ ನಂತರ ಚೆನ್ನಾಗಿ ಒಣಗಿದ ಹುಲ್ಲನ್ನು ಬಣವೆ ಹಾಕಿ ಸಂಗ್ರಹಿಸುವುದು ವಾಡಿಕೆ.  ಒಣ  ಹುಲ್ಲು ವರ್ಷಪೂರ್ತಿ ಹಸು, ಎಮ್ಮೆ ಕರುಗಳ ಜೀವನಾಧಾರ.

ಈ ಬಾರಿ ಭತ್ತದ ಒಕ್ಕಲು ಆರಂಭವಾದಾಗಿನಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭತ್ತದ ಗದ್ದೆಗಳಲ್ಲಿ ಬೆಳೆ ಚಾಪೆ ಹಾಸಿದ್ದು, ತೇವಾಂಶ ಹೆಚ್ಚಾಗಿದೆ. ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗುತ್ತಿದೆ. ಹಸಿ ಹುಲ್ಲನ್ನು ಬೇಲ್‌ ಯಂತ್ರ ಬಳಸಿ ಕಟ್ಟಲು ಮತ್ತು ಬಣವೆ ಹಾಕಲು ಆಗುತ್ತಿಲ್ಲ.

ADVERTISEMENT

ಕೆಲವೆಡೆ ಈಗಾಗಲೇ ಒಣಗಿರುವ ಹುಲ್ಲಿನ ಸಂಗ್ರಹಣೆ, ಕಟ್ಟು ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಒಂದು ಕಟ್ಟಿಗೆ ₹200 ಇದ್ದು, 1 ಎಕರೆಯಿಂದ ದೊರೆಯುವ ಹುಲ್ಲಿಗೆ ಅಂದಾಜು ₹4,000 ಧಾರಣೆ ಇದೆ. ಟ್ರ್ಯಾಕ್ಟರ್‌ ಬಾಡಿಗೆ, ಕಾರ್ಮಿಕರ ಕೂಲಿ ಪ್ರತ್ಯೇಕ.

ಸುತ್ತಮುತ್ತಲ ಪ್ರದೇಶಗಳಾದ ರಾಣೆಬೆನ್ನೂರು, ಹಾವೇರಿ, ರಟ್ಟಿಹಳ್ಳಿ ಹಾಗೂ ಸ್ಥಳೀಯವಾಗಿಯೂ ಬೇಡಿಕೆ ಹೆಚ್ಚಿದೆ ಎಂದು ರೈತರಾದ ಹೊಸಳ್ಳಿ ಕರಿಬಸಪ್ಪ, ಕುಂಬಳೂರು ಹನುಮಂತು, ನಿಟ್ಟೂರು ಬಸವರಾಜಪ್ಪ ಮಾಹಿತಿ ನೀಡಿದರು.

ಭತ್ತದ ಧಾರಣೆ ಕುಸಿದಾಗ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿರುವುದು ವಿಶೇಷ. ಜಾನುವಾರುಗಳಿಗೆ ಹುಲ್ಲು ಬೇಕಾಗಿದ್ದು, ಬೆಲೆ ಅಧಿಕವಾದರೂ ಕೊಳ್ಳಲೇ ಬೇಕಾಗಿದೆ ಎಂದು ರಟ್ಟಿಹಳ್ಳಿ ತಾಲ್ಲೂಕು ಕುಡುಪಲಿ ಗ್ರಾಮದ ರೈತ ಸೋಮಶೇಖರ ಹೇಳಿದರು.

ರೈತರು ಜಾಗರೂಕತೆಯಿಂದ ಹುಲ್ಲನ್ನು ಸಾಗಿಸಬೇಕು. ವಿದ್ಯುತ್‌ ಮಾರ್ಗ ಇರುವೆಡೆ ಟ್ರ್ಯಾಕ್ಟರ್‌ ಮೇಲೆ ಕುಳಿತುಕೊಳ್ಳಬಾರದು. ವೇಗವಾಗಿ ಚಾಲನೆ ಮಾಡುವುದು ಅಪಾಯಕಾರಿ. ಅಕ್ಕಪಕ್ಕದ ಸಂಚರಿಸುವ ವಾಹನಗಳಿಗೆ ಬದು ನೀಡುವಾಗ ಜಾಗ್ರತೆ ವಹಿಸಬೇಕು ಎಂದು ಪೊಲೀಸರು ಸೂಚನೆ ನೀಡಿದರು.

ಮಲೇಬೆನ್ನೂರು ಪಟ್ಟಣದ ಮೂಲಕ ಶನಿವಾರ ಒಣಗಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್‌ ಮೂಲಕ ಸಾಗಣೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.