ಬಸವಾಪಟ್ಟಣ: ಭಾನುವಾರ ಮುಂಜಾನೆಯಿಂದ ಸುರಿದ ಮಳೆಗೆ ಇಲ್ಲಿನ ಗೋತೆ ಹಳ್ಳಕ್ಕೆ ನಿರ್ಮಿಸಿರುವ ಚೆಕ್ಡ್ಯಾಂ ಭರ್ತಿಯಾಗಿದೆ.
ಹೆಚ್ಚುವರಿ ನೀರು ಹಳ್ಳದ ಮೂಲಕ ಇಲ್ಲಿನ ಸಿಹಿ ನೀರು ಕೆರೆ ಸೇರುತ್ತಿದೆ. ಚೆಕ್ಡ್ಯಾಂನಲ್ಲಿ 0.5 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದ ಸುತ್ತಲಿನ 25 ಕಿ.ಮೀ. ವ್ಯಾಪ್ತಿಯ ತೋಟ ಹೊಲಗದ್ದೆಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ರೈತರು ಹೇಳಿದರು.
ಇಲ್ಲಿನ ಸಿಹಿನೀರು ಕೆರೆಯೂ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ತೋಟಗದ್ದೆಗಳಿಗೆ ಸಾಕಷ್ಟು ನೀರು ದೊರೆಯಲಿದ್ದು, ರೈತರು ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯುವ ಆಶಾವಾದ ಹೆಚ್ಚಿದೆ. ಈ ವರ್ಷದ ಮಳೆಗೆ ಸುತ್ತಲಿನ ಗ್ರಾಮಗಳ ಬಹುತೇಕ ಎಲ್ಲಾ ಕೆರೆಗಳೂ ತುಂಬಿವೆ. ದಾಗಿನಕಟ್ಟೆಯ ಇತಿಹಾಸ ಪ್ರಸಿದ್ಧ ನಾಗತಿಕೆರೆಯೂ ಭರ್ತಿಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.