
ಕಡರನಾಯ್ಕನಹಳ್ಳಿ: ಸಮೀಪದ ಭಾನುವಳ್ಳಿ ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಶಾಲಾ ಆವರಣದಲ್ಲಿ ನೀರು ಸಂಗ್ರಹವಾಗಿದೆ. ಒಂದು ಕಡೆಯ ಶಾಲಾ ಕಾಂಪೌಂಡ್ ಭಾಗಶಃ ಹಾನಿಯಾದಗಿದೆ.
ಸಂಗ್ರಹವಾದ ನೀರು ಹರಿದು ಹೋಗಲು ಸ್ಥಳವಕಾಶವಿಲ್ಲದ ಕಾರಣ ಮಕ್ಕಳು ಶೌಚಾಲಯಕ್ಕೆ ಹೋಗದಂಥ ಪರಿಸ್ಥಿತಿ ತಲೆದೋರಿದೆ.
ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಮಳೆ ಬಂದಾಗ ನೀರು ಹರಿದು ಚರಂಡಿ ಸೇರುವಂತೆ ವ್ಯವಸ್ಥೆ ಮಾಡಬೇಕಿತ್ತು. ಈ ಬಗ್ಗೆ ಎಸ್ಡಿಎಂಸಿ ಮತ್ತು ಮುಖ್ಯೋಪಾಧ್ಯಾಯ, ಪ್ರಾಂಶುಪಾಲರು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ಹದ ಮಳೆ ಆಗಿದ್ದು, ತೆಂಗಿನ ತೋಟಗಳು ಮತ್ತು ಅಡಿಕೆ ತೋಟಗಳಿಗೆ ಜೀವ ಕಳೆ ಬಂದಿದೆ. ಬಿತ್ತನೆ ಮಾಡಲು ಅನುಕೂಲಕರವಾಗಿದೆ ಎಂದು ರೈತ ಮುಖಂಡ ಜಿ.ಚಂದ್ರಶೇಖರಪ್ಪ ತಿಳಿಸಿದ್ದಾರೆ.
‘ಭಾನುವಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಜಾಸ್ತಿ ಮಳೆ ಬಂದ ಕಾರಣ ನೀರು ಸಂಗ್ರಹವಾಗಿದೆ. ಸದ್ಯಕ್ಕೆ ಸಂಗ್ರಹವಾದ ನೀರನ್ನು ತೆರವುಗೊಳಿಸಲು ಕ್ರಮ ತೆಗೆದುಕೊಂಡಿದ್ದೇವೆ. ಶಾಲೆ ಆವರಣದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ ಜೆಲ್ಲಿ ಮತ್ತು ಇತರೆ ಸಲಕರಣೆಗಳು ಆವರಣದಲ್ಲಿವೆ. ಆ ಕಾರಣದಿದಲೂ ನೀರು ಸಂಗ್ರಹವಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇವೆ. ಮೈದಾನ ಅಭಿವೃದ್ಧಿ ಮಾಡಲು ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.