ಕಡರನಾಯ್ಕನಹಳ್ಳಿ: ಸಮೀಪದ ಉಕ್ಕಡಗಾತ್ರಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಜೊತೆಗೆ ಆಲಿಕಲ್ಲು ಬಿದ್ದಿದ್ದರಿಂದ ಬತ್ತದ ಪೈರಿಗೆ ಹಾನಿಯುಂಟಾಗಿದೆ.
ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹಾವನೂರು ತಿಪ್ಪೇಶ್ ಅವರ ಮನೆ ಮೇಲೆ ಮರ ಉರುಳಿ ಬಿದ್ದಿದೆ. ಮರದ ಸಮೀಪ ವಿದ್ಯುತ್ ತಂತಿ ಹಾದು ಹೋಗಿದ್ದು, ವಿದ್ಯುತ್ ತಂತಿ ಮರವನ್ನು ತಡೆಹಿಡಿದಿದ್ದರಿಂದ ಮನೆಗೆ ದೊಡ್ಡ ಹಾನಿಯಾಗಿಲ್ಲ. ಹಲವು ಹೆಂಚುಗಳು ಮುರಿದಿವೆ. ವಿದ್ಯುತ್ ತಂತಿ ಮೇಲೆ ಮರ ಉರುಳಿದ ಪ್ರಯುಕ್ತ ತಡರಾತ್ರಿವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಉಕ್ಕಡಗಾತ್ರಿಯಲ್ಲಿ ಗುಡುಗು, ಮಿಂಚು, ಗಾಳಿ ಸಮೇತ ಮಳೆ ಸುರಿದಿದೆ. ಯಥೇಚ್ಛವಾಗಿ ಆಲಿಕಲ್ಲುಗಳು ಸುರಿದಿವೆ.
ಗ್ರಾಮಸ್ಥರು ಸುರಿವ ಮಳೆಯನ್ನು ಲೆಕ್ಕಿಸದೆ ಆಲಿಕಲ್ಲು ಸಂಗ್ರಹಿಸಿದರು. ಆಲಿಕಲ್ಲು ಮಳೆಗೆ ಗ್ರಾಮದ ಸುತ್ತ ಮುತ್ತಲಿನ ಗದ್ದೆಯಲ್ಲಿನ ಬತ್ತದ ಪೈರು ನೆಲಕ್ಕುರುಳಿದ್ದು, ರೈತರು ಆತಂಕಗೊಂಡಿದ್ದಾರೆ.
ಬೇಸಿಗೆ ಬಿಸಿಲಿನ ತಾಪಕ್ಕೆ ಅಡಿಕೆ, ತೆಂಗಿನ ತೋಟಗಳು ಬಾಡಲಾರಂಭಿಸಿದ್ದವು. ಸೋಮವಾರ ಸುರಿದ ಮಳೆಗೆ ರೈತರು ಸಂತಸಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.