ದಾವಣಗೆರೆ: ‘ಬದುಕಿನ ನೋವು ಯಾತನೆಗೆ ಕಾವ್ಯ, ನಾಟಕ, ಪ್ರತಿಭಟನೆ ಕರವಸ್ತ್ರ ಇದ್ದಂತೆ. ಆ ಕರವಸ್ತ್ರ ನಿರ್ದಿಗಂತ ಕಲಾವಿದರ ಕಾವ್ಯರಂಗವಾಗಿದೆ’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಅಭಿಪ್ರಾಯಪಟ್ಟರು.
ನಿರ್ದಿಗಂತ ರಂಗಪಯಣದ ಕಲಾವಿದರು ನಗರದ ಎವಿಕೆ ಕಾಲೇಜಿನಲ್ಲಿ ಬುಧವಾರ ನಡೆಸಿಕೊಟ್ಟ ʻಕಾವ್ಯರಂಗʼ ವಿಶಿಷ್ಟ ರಂಗಪ್ರಯೋಗದಲ್ಲಿ ಅವರು ಮಾತನಾಡಿದರು.
‘ಸಮಾಜ ಹಾಗೂ ನಮ್ಮ ಮೇಲೆ ಆಗುವ ಅನ್ಯಾಯವನ್ನು ನಾವು ಪ್ರಶ್ನೆ ಮಾಡದೇ ಇದ್ದರೆ ನಮ್ಮ ಜೊತೆ ಯಾರೂ ನಿಲ್ಲುವುದಿಲ್ಲ’ ಎಂಬುದನ್ನು ಒಂದು ಕಥೆಯ ಮೂಲಕ ವಿವರಿಸಿದರು.
‘ಮೊಬೈಲ್ಗಳಿಂದ ಇಂದು ವಿದ್ಯಾರ್ಥಿಗಳು ಅಧ್ಯಯನದ ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನೆಯನ್ನೂ ಕಳೆದುಕೊಂಡಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಮೊಬೈಲ್ ತರಬೇಡಿ, ಮನೆಯಲ್ಲೇ ಬಿಟ್ಟು ಬನ್ನಿ. ಇದರಿಂದ ಯಾವ ನಷ್ಟವೂ ಆಗುವುದಿಲ್ಲ’ ಎಂದು ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.
‘ರಂಗಭೂಮಿ ಸಮಾಜವನ್ನು ಒಡೆಯುವ ವ್ಯಕ್ತಿಗಳಿಗೆ ವಿರುದ್ಧವಾಗಿ ನಿಲ್ಲುತ್ತದೆ. ಪ್ರಸ್ತುತದ ಸವಾಲುಗಳಿಗೆ ಉತ್ತರ ನೀಡುವ ಶಕ್ತಿ, ರಂಗಭೂಮಿಗೆ ಇದೆ. ಇಂದು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗಿಲ್ಲ. ಆ ಸಮಸ್ಯೆಗಳಿಗೆ ಉತ್ತರ ನೀಡುವ ಶಕ್ತಿ ರಂಗಭೂಮಿಗಿದೆ’ ನಿರ್ದಿಗಂತ ತಂಡದ ಸೃಜನಶೀಲ ನಿರ್ದೇಶಕಿ ಪ್ರೀತಿ ನಾಗರಾಜ ಹೇಳಿದರು.
ಎವಿಕೆ ಪ್ರಾಂಶುಪಾಲರಾದ ಕಮಲ ಸೊಪ್ಪಿನ, ರಂಗ ತಜ್ಞ ಬಾ.ಮ. ಬಸವರಾಜಯ್ಯ, ಕಲಾವಿದ ಆರ್.ಟಿ. ಅರುಣ್ ಕುಮಾರ್, ರಂಗ ಬಳಗದ ಅನೀಸ್ ಪಾಷ, ಹೆಗ್ಗೆರೆ ರಂಗಪ್ಪ, ಮಲ್ಲೇಶ್, ರವಿಂದ್ರ ಅರಳಗುಪ್ಪಿ. ದೇವೇಂದ್ರಪ್ಪ ಕೆ., ಲತೀಫ್ ನವಿಲೇಹಾಳ್, ಸಿದ್ಧರಾಜು, ಅನಿತಾ ಎಚ್. ಇತರರು ಇದ್ದರು.
‘ನಿರ್ದಿಗಂತ’ ರಂಗಪಯಣದ ಕಲಾವಿದರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಾಟಕ ಪ್ರದರ್ಶನ ಇಂದು
ನಿರ್ದಿಗಂತ ಕಲಾವಿದರು ಅಭಿನಯಿಸುವ ʻಗಾಯಗಳು ʼ ನಾಟಕ ಪ್ರದರ್ಶನ ಆಗಸ್ಟ್ 17ರಂದು ಸಂಜೆ 6.30ಕ್ಕೆ ಬಿಐಇಟಿಯ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ. ಎಸ್.ಎಸ್.ಕೇರ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.