ದಾವಣಗೆರೆ: ಪಾಲಿಕೆಯಿಂದ ₹ 50 ಲಕ್ಷ ವೆಚ್ಚದಲ್ಲಿ ನಗರದ ಅರುಣ ಟಾಕೀಸ್ ಬಳಿ ‘ಕುದುರೆ ಏರಿದ ಕಿತ್ತೂರು ರಾಣಿ ಚನ್ನಮ್ಮ’ ಪುತ್ಥಳಿ ಸ್ಥಾಪನೆಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಬಿ. ಲೋಕೇಶ್, ‘2001ರಲ್ಲಿ ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ, ಕೊಟ್ರೇಶ್ ಕಂಚಿಕೇರಿ ಅವರ ಮುಂದಾಳತ್ವದಲ್ಲಿ ಈ ವೃತ್ತದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಆಚರಿಸಲು ಆರಂಭಿಸಲಾಯಿತು’ ಎಂದು ನೆನಪಿಸಿಕೊಂಡರು.
‘2003ರಲ್ಲಿ ನಗರಸಭೆಯಲ್ಲಿ ಈ ವೃತ್ತಕ್ಕೆ ಚನ್ನಮ್ಮ ಹೆಸರು ಇಡಬೇಕೆಂದು ಠರಾವು ಮಾಡಿ, ನಾಮಕರಣ ಮಾಡಲಾಯಿತು. 2009-10ರಲ್ಲಿ ಪಾಲಿಕೆಯಲ್ಲಿ ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವೇಶ್ವರ, ಅಂಬೇಡ್ಕರ್, ರಾಯಣ್ಣ ಸೇರಿ ಐವರು ಮಹನೀಯರ ಪುತ್ಥಳಿ ನಿರ್ಮಿಸಬೇಕೆಂದು ಠರಾವು ಮಾಡಲಾಯಿತು. ಅದರಂತೆ ರಾಯಣ್ಣರ ಪುತ್ಥಳಿಯನ್ನು ಈ ಹಿಂದೆಯೇ ಲೋಕಾರ್ಪಣೆ ಮಾಡಲಾಗಿತ್ತು. ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ನಡೆದಿದೆ. ಅಲ್ಲದೆ, ರಾಣಿ ಚನ್ನಮ್ಮ ಮತ್ತು ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆಯು ನೆರವೇರಿಸಲಾಗಿದೆ. ಈ ವೃತ್ತದಲ್ಲಿ 21.5 ಅಡಿ ಎತ್ತರದ ವೀರರಾಣಿ ಕಿತ್ತೂರು ಚನ್ನಮ್ಮರ ಅಶ್ವಾರೂಢ ಪ್ರತಿಮೆ ನಿರ್ಮಾಣವಾಗಲಿದೆ’ ಎಂದು ಮಾಹಿತಿ ನೀಡಿದರು.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಪಾಲಿಕೆ ವಿರೋಧ ಪಕ್ಷ ನಾಯಕ ಎ. ನಾಗರಾಜ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್, ಸದಸ್ಯ ಪ್ರಸನ್ನಕುಮಾರ್, ಬಿ.ಜಿ. ಅಜಯಕುಮಾರ್, ಸೋಗಿ ಶಾಂತಕುಮಾರ್, ಜಯಮ್ಮ ಗೋಪಿನಾಯ್ಕ, ಪಂಚಸಾಲಿ ಸಮಾಜದ ಮುಖಂಡರಾದ ಎಂ.ದೊಡ್ಡಪ್ಪ, ಕಂಚಿಕೇರಿ ಕೊಟ್ರೇಶ್, ಬಂಕಾಪುರ ಚನ್ನಬಸಪ್ಪ, ಬದಾಮಿ ಜಯಣ್ಣ, ಶಿವಶಂಕರ್, ಅಶೋಕ್ ಗೋಪನಾಳ್, ಮಹಾಂತೇಶ್ ಒಣರೊಟ್ಟಿ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.