ದಾವಣಗೆರೆ: ನಗರದ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಜನವರಿ 30ರಿಂದ ಮೂರು ದಿನಗಳ ಕಾಲ ಬಸವನ ಬಾಗೇವಾಡಿಯ ರೇಖಾಚಿತ್ರ ಕಲಾವಿದ ರಾಮಪ್ಪ ಸಾಸನೂರ್ ಅವರ ಏಕವ್ಯಕ್ತಿ ರೇಖಾಚಿತ್ರ ಪ್ರದರ್ಶನ ‘ರೇಖಾ ಲಾಸ್ಯ’ ಹಮ್ಮಿಕೊಳ್ಳಲಾಗಿದೆ.
ಬಸವನ ಬಾಗೇವಾಡಿಯ ಎಚ್. ಹಿಪ್ಪರಗಿಯ ದೃಶ್ಯಕಲಾ ಮಹಾವಿದ್ಯಾಲಯದ ಉಪನ್ಯಾಸಕರಾಗಿರುವ ರಾಮಪ್ಪ ಸಾಸನೂರ್ ಅವರು ಬರೆದಿರುವ ಸುಮಾರು 40 ರೇಖಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಮಪ್ಪ ಅವರ ರೇಖಾಚಿತ್ರಗಳು ಭಾವಗೀತಾತ್ಮಕ ರೇಖೆಗಳು, ಪಿಕ್ಟೋರಿಯಲ್ ಲೈನ್ ಡ್ರಾಯಿಂಗ್, ಕನ್ನಡದ ಒಲವಿನ ಕವಿ ಕೆ.ಎಸ್. ನರಸಿಂಗಸ್ವಾಮಿ ಅವರ ಕವಿತೆಗಳಂತೆ ಶೃಂಗಾರ–ಲಾಸ್ಯ ಗುಣಗಳನ್ನು ಮೈದುಂಬಿಕೊಂಡಿವೆ. ಅವರ ರೇಖೆಗಳ ಬಾಗು–ಬಳುಕು, ವೈಯ್ಯಾರ ವಿಶೇಷತೆಗಳು ಸಮ್ಮೋಹನಗೊಳಿಸುತ್ತವೆ.
ಜ. 30ರಂದು ಬೆಳಿಗ್ಗೆ 11.30ಕ್ಕೆ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್. ಕಮ್ಮಾರ್ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಚಿತ್ರಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ಕುಮಾರ್ ಪಿ. ವಲ್ಲೇಪುರೆ, ಅನ್ವಯಿಕ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಯರಾಜ್ ಎಂ. ಚಿಕ್ಕಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ಕಾಲ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ರೇಖಾಚಿತ್ರಗಳ ಪ್ರದರ್ಶನ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.