
ಕಡರನಾಯ್ಕನಹಳ್ಳಿ: ಸಮೀಪದ ಕೊಕ್ಕನೂರು ಹೊರವಲಯದಲ್ಲಿರುವ ಹೊರಬೀರದೇವರ ದೊಡ್ಡ ಎಡೆ ಜಾತ್ರೆ ವಿವಿಧ ಗ್ರಾಮದ 106 ದೇವತಾ ಉತ್ಸವ ಮೂರ್ತಿಗಳು, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಮುಂಜಾನೆ ಈರಗಾರರಿಂದ ಹಲಗ ಹಾಯುವ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆದವು. ದೊಡ್ಡ ಎಡೆ ಸಿದ್ಧವಾದ ನಂತರ ಬೀರದೇವರ ಆಯುದ ಹಿಡಿದು ಈರಗಾರರು ವೀರಾವೇಶದ ಭಂಗಿಯನ್ನು ಪ್ರದರ್ಶನ ಮಾಡಿದರು.
ಜಾತ್ರೆಯ ಪ್ರಯುಕ್ತ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.
ಶನಿವಾರ ಸಂಜೆ ಕೊಕ್ಕನೂರು ಗ್ರಾಮಕ್ಕೆ ವಿವಿಧ ಗ್ರಾಮಗಳಿಂದ 106 ದೇವತಾ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಆಗಮಿಸಿ ಆಂಜನೇಯ ಸ್ವಾಮಿ ರಥಬೀದಿಯಲ್ಲಿ ಅನಾವರಣಗೊಂಡವು. ನಂತರ ಹೊರವಲಯದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಲುಪಿದವು.
ನಂತರ ಎಲ್ಲಾ ಉತ್ಸವ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ಭಾನುವಾರ ಬ್ರಾಹ್ಮಿ ಮೂಹೂರ್ತದಲ್ಲಿ ಅಭಿಷೇಕ, ವಿಶೇಷ ಪೂಜೆ ಮಾಡಲಾಯಿತು.
ನಂದಿಗುಡಿ ವೃಷಭ ಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿದರು.
ಭಕ್ತಿ ಸಾಗರದಂತೆ 106 ದೇವತಾ ಉತ್ಸವ ಮೂರ್ತಿಗಳೊಡನೆ ಸಹಸ್ರಾರು ಭಕ್ತರು ಸೇರಿ ಆಚರಿಸುತ್ತಿರುವ ಬೀರಲಿಂಗೇಶ್ವರ ದೇವರ ದೊಡ್ಡ ಎಡೆ ಸಂಭ್ರಮ ಸೌಹಾರ್ದತೆಯ ಸಂಕೇತವಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.