ಚನ್ನಗಿರಿ: ‘ಧಾರ್ಮಿಕ ಪರಂಪರೆ ಉಳಿಸುವ ಕಾರ್ಯವನ್ನು ಶತಮಾನಗಳಿಂದಲೂ ಮಠಗಳು ಮಾಡುತ್ತಾ ಬಂದಿವೆ. ಧರ್ಮ ಪರಂಪರೆಗೆ ನಾಂದಿ ಹಾಡಿದ್ದು ನಮ್ಮ ಕನ್ನಡನಾಡು’ ಎಂದು ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ವಚನಾಮೃತ ಮಂಗಲ, ಜಯದೇವ ಸ್ವಾಮೀಜಿಗಳ ಪಂಚಮ ಸ್ಮರಣೋತ್ಸವ ಹಾಗೂ ಬಸವತತ್ವ ಕಾರ್ಯಕ್ರಮದಲ್ಲಿ ಲೀಲಾಮೃತ ಪುರಾಣ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಶುದ್ಧ ಭಕ್ತಿಯಿಂದ ಪರಮಾತ್ಮನನ್ನು ಪೂಜಿಸಿದರೆ ಆತ್ಮ ಶುದ್ಧಿಯಾಗುವುದಲ್ಲದೇ ಪರಮಾತ್ಮದ ಪ್ರೇರಣೆ ಸಿಗುತ್ತದೆ. ಉತ್ತಮ ಕಾರ್ಯ ಮಾಡಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಏಕಾಗ್ರತೆ ಇದ್ದರೆ ಎಂತಹ ಕಷ್ಟದ ಕಾರ್ಯಗಳನ್ನೂ ಸುಲಭವಾಗಿ ಮಾಡಬಹುದು ಎಂದರು.
‘ಭಕ್ತರಿಲ್ಲದೇ ಮಠಗಳಿಲ್ಲ. ಮಾನವನ ಕಲ್ಯಾಣಕ್ಕಾಗಿ ಮಠ ಮತ್ತು ಸ್ವಾಮೀಜಿಗಳ ಕೊಡುಗೆ ಅಪಾರವಾದದ್ದು. ಮಠಗಳು ಜ್ಞಾನ ದಾಸೋಹ, ಅನ್ನದಾಸೋಹದ ಜತೆಗೆ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ತೊಡಗಿವೆ’ ಎಂದು ಹಾಲಸ್ವಾಮಿ ವಿರಕ್ತ ಮಠದ ಬಸವಜಯಚಂದ್ರ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಗುರುಶ್ರೀ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಬಿ. ಗಂಗಾಧರ್, ಗುತ್ತಿಗೆದಾರ ಎಂ.ಡಿ. ಮಹಾಬಲೇಶ್ವರ, ಹೊಸಕೋಟೆ ಡೆವಲಪರ್ ಎಂ.ಬಿ. ಮಂಜುನಾಥ್, ಕೊಳದ ಮಠದ ವ್ಯವಸ್ಥಾಪಕ ಟಿ.ಎಸ್. ಹರ್ಷ, ಪುರಸಭೆ ಸದಸ್ಯ ಬಿ.ಆರ್. ಹಾಲೇಶ್, ಕಾಂಗ್ರೆಸ್ ಮುಖಂಡ ಮಂಜುನಾಥ್, ವೀರಶೈವ ಸಮಾಜದ ಗೌರವಾಧ್ಯಕ್ಷ ಎನ್.ಯು. ರಾಜಶೇಖರಯ್ಯ, ಶಿಕ್ಷಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಲೇಖಕ ಮಹಾಂತೇಶ್ ಶಾಸ್ತ್ರಿ ಅವರ ‘ಬಸವಾರ್ಯ ತಾತನವರ ಲೀಲಾಮೃತ ಪುರಾಣ’ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.