ADVERTISEMENT

ಹೊನ್ನಾಳಿ: ಕೆಎಸ್‌ಆರ್‌ಟಿಸಿ ಚಾಲಕರಾದ ರೇಣುಕಾಚಾರ್ಯ!

ಹೊನ್ನಾಳಿ–ಅರಹತೊಳಲಿಗೆ ಎರಡು ಮಾರ್ಗಗಳಲ್ಲಿ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 9:51 IST
Last Updated 7 ಜನವರಿ 2020, 9:51 IST
ಹೊನ್ನಾಳಿ ತಾಲ್ಲೂಕಿನಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಚಾಲಕರ ಸಮವಸ್ತ್ರವನ್ನೂ ಧರಿಸಿ, ತಾವೇ ಹಳ್ಳಿಗಳಿಗೆ ಬಸ್‌ ಚಲಾಯಿಸಿಕೊಂಡು ಹೋದರು.
ಹೊನ್ನಾಳಿ ತಾಲ್ಲೂಕಿನಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಚಾಲಕರ ಸಮವಸ್ತ್ರವನ್ನೂ ಧರಿಸಿ, ತಾವೇ ಹಳ್ಳಿಗಳಿಗೆ ಬಸ್‌ ಚಲಾಯಿಸಿಕೊಂಡು ಹೋದರು.   

ಹೊನ್ನಾಳಿ: ಇಲ್ಲಿನ ಖಾಸಗಿ ಬಸ್‍ನಿಲ್ದಾಣದಿಂದ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ತಾವೇ ಬಸ್ ಚಾಲನೆ ಮಾಡಿಕೊಂಡು ಹಳ್ಳಿಗಳಿಗೆ ಹೋಗುವ ಮೂಲಕ ಚಾಲನೆ ನೀಡಿದರು.

‘ವಿಧಾನಸಭಾ ಚುನಾವಣೆಗೂ ಮುನ್ನ ಬಸ್ ತಲುಪದ ಗ್ರಾಮಗಳಿಗೆ ಕೆಎಸ್‍ಆರ್‌ಟಿಸಿ ಬಸ್‍ಗಳನ್ನು ಸಂಚರಿಸುವಂತೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಹೊನ್ನಾಳಿಯಿಂದ ಕುಳಗಟ್ಟೆ ಕ್ರಾಸ್ ಮೂಲಕ ವಿವಿಧ ಹಳ್ಳಿಗಳ ಮುಖಾಂತರ ಭದ್ರಾವತಿ ತಾಲ್ಲೂಕು ಅರಹತೊಳಲು ಕ್ರಾಸ್ ಮೂಲಕ ಒಂದು ಬಸ್ ಸಂಚರಿಸಿದರೆ, ಮತ್ತೊಂದು ಬಸ್ ಹೊನ್ನಾಳಿಯಿಂದ ಬೆನಕನಹಳ್ಳಿ ಕ್ರಾಸ್‍ ಹಾದು, ಆನವೇರಿ ಮೂಲಕ ವಿವಿಧ ಹಳ್ಳಿಗಳಲ್ಲಿ ನಿಲುಗಡೆಯಾಗಿ ಭದ್ರಾವತಿ ತಾಲ್ಲೂಕು ಅರಹತೊಳಲು ಕ್ರಾಸ್‍ಗೆ ಸೇರುತ್ತದೆ ಎಂದು ತಿಳಿಸಿದರು.

ADVERTISEMENT

ಕೆಸ್‍ಆರ್‌ಟಿಸಿ ಬಸ್ ಶಾಸಕರ ಚಾಲನೆಯೊಂದಿಗೆ ಹಳ್ಳಿಗಳಿಗೆ ಬಂದಾಗ ಮಹಿಳೆಯರು ಹಾಗೂ ಗ್ರಾಮಸ್ಥರು ಸ್ವಾಗತ ಕೋರಿದರು. ಬಸ್‍ಗೆ ಪೂಜೆ ಸಲ್ಲಿಸಿ ಶಾಸಕರಿಗೆ ಹೂವಿನ ಮಾಲೆ ಹಾಕಿ ಸ್ವಾಗತಿಸಿದರು.

ಶಿಳ್ಳೆ ಹೊಡೆದ ಅಜ್ಜಿ: ಊರಿಗೆ ಕೆಸ್‍ಆರ್‌ಟಿಸಿ ಬಸ್ ಬಂದಿದ್ದನ್ನು ಕಂಡ ಬೀರಗೊಂಡನಹಳ್ಳಿ ಗ್ರಾಮದ ಅಜ್ಜಿಯೊಬ್ಬರು ಯುವಕರು ನಾಚುವಂತೆ ಶಿಳ್ಳೆ ಹೊಡೆದು ಸಂಭ್ರಮಿಸಿದರು.

ನ್ಯಾಮತಿ ವರದಿ: ಶಾಸಕ ರೇಣುಕಾಚಾರ್ಯ ಹೊನ್ನಾಳಿ ಖಾಸಗಿ ಬಸ್‍ನಿಲ್ದಾಣದಿಂದ ಬಸ್ ಚಲಾಯಿಸಿಕೊಂಡು ಸೊರಟೂರು, ರಾಮೇಶ್ವರ, ನ್ಯಾಮತಿ, ಕೋಡಿಕೊಪ್ಪ, ಚಟ್ನಹಳ್ಳಿ ಮುಸ್ಸೇನಾಳ್ ಮೂಕಲ ಶಿವಮೊಗ್ಗ ತಲುಪಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್, ನ್ಯಾಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಗೀತಮ್ಮ, ಕೆಲ ಸದಸ್ಯರು ಬಸ್ಸಿನಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.