ADVERTISEMENT

ದಾವಣಗೆರೆ: ನಿವೇಶನ ಕೊಡಿಸುವುದಾಗಿ ₹1.50 ಕೋಟಿ ವಂಚನೆ

ನೊಂದ ಮಹಿಳೆಯರಿಂದ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:01 IST
Last Updated 29 ನವೆಂಬರ್ 2020, 2:01 IST

ದಾವಣಗೆರೆ: ನಿವೇಶನ ಕೊಡಿಸುವುದಾಗಿ ನಂಬಿಸಿದ ಮಹಿಳೆಯೊಬ್ಬರು 10ಕ್ಕೂ ಹೆಚ್ಚು ಮಹಿಳೆಯರಿಗೆ ಒಟ್ಟು ₹ 1.50 ಕೋಟಿ ಹಣ ವಂಚಿಸಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆಯರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರೀತಿ ಎಂಬವರ ವಿರುದ್ಧ ಈ ಆರೋಪ ಕೇಳಿಬಂದಿದೆ. ನಗರದ ವಿವಿಧ ಬಡಾವಣೆಗಳಲ್ಲಿರುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಬೇರೆ ಬೇರೆ ಕಾರಣಗಳನ್ನು ಹೇಳಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೋಸ ಹೋದವರಲ್ಲಿ ಗೃಹಿಣಿಯರು, ಶಿಕ್ಷಕಿಯರು ಸೇರಿದ್ದಾರೆ.

‘ಪ್ರೀತಿ ಅವರು ಜೆ.ಎಚ್. ಪಟೇಲ್ ಬಡಾವಣೆಯಲ್ಲಿ 30X40 ಅಳತೆಯ ಸೈಟ್ ಇದೆ ಎಂದು ತೋರಿಸಿ ₹ 15 ಲಕ್ಷ ತೆಗೆದುಕೊಂಡಿದ್ದಾರೆ. ಅಲ್ಲದೇ ಇದ್ದ ಒಂದು ಸೈಟ್‌ ಅನ್ನು ಹಲವು ಮಹಿಳೆಯರಿಗೆ ತೋರಿಸಿ ಕೋಟ್ಯಂತರ ಹಣ ಪಡೆದು, ವಂಚಿಸಿದ್ದಾರೆ. ಹಣ ವಾಪಸ್ ಕೇಳಲು ಹೋದಾಗ ಚೆಕ್ ನೀಡಿದ್ದು, ಅವುಗಳು ಬೌನ್ಸ್ ಆಗಿವೆ’ ಎಂದು ಶಾಮನೂರು ರೋಡ್‌ನ ಕುವೆಂಪುನಗರ ನಿವಾಸಿ ಶೈಲಜಾ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಒಬ್ಬರಿಂದ ಹಣ ಪಡೆದ ನಂತರ ‘ಯಾರಿಗೂ ಹೇಳಬೇಡಿ’ ಎಂದು ರಹಸ್ಯ ಕಾಪಾಡುತ್ತಿದ್ದಳು. ನಿಮ್ಮಿಂದ ಪಡೆದ ಹಣಕ್ಕೆ ಬಡ್ಡಿ ಕಟ್ಟುತ್ತೇನೆ, ಮನೆ ಮಾರಾಟ ಮಾಡಿ ಸಾಲ ತೀರಿಸುತ್ತೇನೆ’ ಎಂದು ಭರವಸೆ ನೀಡಿದ್ದಳು. ಆದರೆ ಬಡ್ಡಿಯೂ ಇಲ್ಲ, ಅಸಲೂ ಇಲ್ಲ ಎನ್ನುವ ಪರಿಸ್ಥಿತಿ ಇದೆ’ ಎಂದು ಹಣ ಕಳೆದುಕೊಂಡ ಮಹಿಳೆಯರು ಅಳಲು ತೋಡಿಕೊಂಡರು.

‘ನಾನು ಸೀರೆ ವ್ಯಾಪಾರ ಮಾಡುತ್ತೇನೆ. ನನಗೂ ಸೈಟ್ ಕೊಡಿಸುವುದಾಗಿ ಹೇಳಿ ಕಂತುಗಳಲ್ಲಿ ₹ 6 ಲಕ್ಷ ಪಡೆದಿದ್ದಾಳೆ. ಇದೇ ರೀತಿ ಹಲವರಿಗೆ ವಂಚನೆಯಾಗಿದೆ’ ಎಂದು ಸೀರೆ ವ್ಯಾಪಾರಿರಾಜೇಶ್ವರಿ ಅಳಲು ತೋಡಿಕೊಂಡರು.

ಬಡಾವಣೆ ಠಾಣೆಯ ಪೊಲೀಸರು ಶನಿವಾರ ಪ್ರೀತಿ ಅವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.