ADVERTISEMENT

ದಾವಣಗೆರೆ: ರಸ್ತೆ ಬದಿ ಅಸ್ವಸ್ಥಗೊಂಡ ವೃದ್ಧೆ, ಮಾನವೀಯತೆ ಮರೆತ ಜನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:53 IST
Last Updated 2 ಅಕ್ಟೋಬರ್ 2020, 16:53 IST
ದಾವಣಗೆರೆಯ ಹಳೇ ಬಸ್ ನಿಲ್ದಾಣದ ಬಳಿ ಶುಕ್ರವಾರ ವೃದ್ಧೆಯೊಬ್ಬರು ಅಸ್ವಸ್ಥಗೊಂಡು ಬಿದ್ದಿರುವುದು
ದಾವಣಗೆರೆಯ ಹಳೇ ಬಸ್ ನಿಲ್ದಾಣದ ಬಳಿ ಶುಕ್ರವಾರ ವೃದ್ಧೆಯೊಬ್ಬರು ಅಸ್ವಸ್ಥಗೊಂಡು ಬಿದ್ದಿರುವುದು   

ದಾವಣಗೆರೆ: ಇಲ್ಲಿನಹಳೇ ಬಸ್ ನಿಲ್ದಾಣದ ಬಳಿ ಶುಕ್ರವಾರ ವೃದ್ಧೆಯೊಬ್ಬರುಬೆಳಿಗ್ಗೆಯಿಂದ ಅಸ್ವಸ್ಥಗೊಂಡು ಬಿದ್ದಿದ್ದರೂ ಯಾರೊಬ್ಬರೂ ಅವರ ನೆರವಿಗೆ ಧಾವಿಸದೆ ಮಾನವೀಯತೆ ಮರೆತರು. ಈ ಸಂಬಂಧ ವಿಡಿಯೊ ಹರಿದಾಡಿದೆ.

ಊಟವಿಲ್ಲದೆಯೋ, ಅನಾರೋಗ್ಯದಿಂದಲೋ ನಿತ್ರಾಣಗೊಂಡು ಅಸ್ವಸ್ಥರಾಗಿ ಬೆಳಿಗ್ಗೆ 11ರಿಂದ ಅದೇ ಸ್ಥಳದಲ್ಲಿ ವೃದ್ಧೆ ಬಿದ್ದಿದ್ದರೂ ರಾತ್ರಿ 10ರ ವರೆಗೂ ಯಾರೊಬ್ಬರೂ ಅತ್ತ ಸುಳಿಯಲಿಲ್ಲ. ಅಜ್ಜಿಯನ್ನು ದೂರದಿಂದಲೇ ಕಂಡ ಎದುರಿನ ಬಟ್ಟೆ ಅಂಗಡಿಯ ಮಾಲೀಕರಾದ ಅರುಣಾ ಪೊಲೀಸರಿಗೆ, 108 ಸಿಬ್ಬಂದಿ, ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆ ಮಾಡಿ ಮಾಹಿತಿ ನೀಡಿದರು. ಆದರೂ ಯಾರೊಬ್ಬರಿಂದಲೂ ಸ್ಪಂದನ ಸಿಗಲಿಲ್ಲ. ಬಳಿಕ 108 ಆಂಬುಲೆನ್ಸ್ ಸಿಬ್ಬಂದಿ ಬಂದರೂ ಹಾಗೆಯೇ ಹೋದರು.

ಹಲವರು ಕರೆ ಮಾಡಿದ ಬಳಿಕ ರಾತ್ರಿ ವೇಳೆಗೆ ವೃದ್ಧೆಯನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ADVERTISEMENT

‘ಬೆಳಿಗ್ಗೆ 11ರಿಂದ ಅಜ್ಜಿ ಅದೇ ಸ್ಥಳದಲ್ಲಿ ಬಿದ್ದಿದ್ದರು. ಹಲವರು ಹತ್ತಿರ ಬಂದು ನೋಡಿ ವಾಪಸಾಗುತ್ತಿದ್ದರು. ನನಗೆ ನೋಡಲು ಆಗದೆ 108 ಆಂಬುಲೆನ್ಸ್‌ಗೆ ಕರೆ ಮಾಡಿದೆ. ಅವರು ಬರಲಿಲ್ಲ. ನನಗೆ ತಿಳಿದ ಪೊಲೀಸರಿಗೆ ಕರೆ ಮಾಡಿದೆ. ಅವರು ಆ ವ್ಯಾಪ್ತಿಯ ಪೊಲೀಸರಿಗೆ ಕರೆ ಮಾಡುವಂತೆ ತಿಳಿಸಿದರು. ಬಳಿಕ ಜಿಲ್ಲಾಸ್ಪತ್ರೆಗೆ ಕರೆ ಮಾಡಿದರೆ ಅಲ್ಲಿ ಸೂಪರಿಂಟೆಂಡ್‌ ಇಲ್ಲ ಎಂದರು. ಬಳಿಕ ಪರಿಚಯದ ಪತ್ರಕರ್ತರಿಗೆ ತಿಳಿಸಿದೆ. ಅಜ್ಜಿ ಬಳಿ ಬ್ಯಾಂಕ್ ಪಾಸ್‌ಬುಕ್, ರೇಶನ್ ಕಾರ್ಡ್‌ ಇತ್ತು. ಅಲ್ಲಿ ಶಾರದಮ್ಮ ಗೊಪ್ಪೇನಹಳ್ಳಿ, ಚನ್ನಗಿರಿ ತಾಲ್ಲೂಕು ಎಂದು ವಿಳಾಸ ಇತ್ತು’ ಎಂದು ಪ್ರತ್ಯಕ್ಷದರ್ಶಿ ಅರುಣಾ ‘ಪ್ರಜಾವಾಣಿ’ಗೆ ತಿಳಿಸಿದರು.

ವೃದ್ಧೆ ರಸ್ತೆ ಬದಿ ಬಿದ್ದಿದ್ದರೂ ಗಮನಹರಿಸದ ಆರೋಗ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಕಾರ್ಯವೈಖರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.