ದಾವಣಗೆರ: ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಉಪನ್ಯಾಸಕನಿಗೆ ವಿದ್ಯಾರ್ಥಿಗಳು ಅಟ್ಟಾಡಿಸಿ ಹೊಡೆಯುವ ವಿಡಿಯೊ ವೈರಲ್ ಆಗಿದೆ.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಬಸವರಾಜ್ ಏಟು ತಿಂದವರು. ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆ ಪಡೆದು ಅದಕ್ಕೆ ಏನೇನೋ ಸಂದೇಶ ಕಳುಹಿಸುತ್ತಿದ್ದ. ಅದನ್ನು ವಿದ್ಯಾರ್ಥಿನಿಯರು ಕೆಲವು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಶನಿವಾರ ಸಂಜೆ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳ ಗುಂಪೊಂದು ಈ ಬಗ್ಗೆ ಪ್ರಶ್ನಿಸಿ ಏಟು ನೀಡಿದೆ. ಉಪನ್ಯಾಸಕ ತಪ್ಪಿಸಿಕೊಂಡು ಓಡುತ್ತಿದ್ದರೂ ಅಟ್ಟಾಡಿಸಿ ಹೊಡೆದಿದ್ದಾರೆ. ಇದರ ವಿಡಿಯೊ ಸೋಮವಾರ ನಗರದಾದ್ಯಂತ ಹರಡಿದೆ.
ಪೊಲೀಸರಿಗೆ ಮನವಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗವು ಸೋಮವಾರ ಹೆತ್ತವರ ಜತೆಗೆ ಕಾಲೇಜಿಗೆ ಬಂದು ಈ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಬಡಾವಣೆ ಪೊಲೀಸರಿಗೆ ಮನವಿ ನೀಡಿದ್ದು, ಈ ಉಪನ್ಯಾಸಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ವೇದಿಕೆಯ ಅಧ್ಯಕ್ಷೆ ಸುವರ್ಣಮ್ಮ, ಪುಷ್ಪಾವತಿ, ನೀಲಮ್ಮ, ಎಂ. ರಾಜಕುಮಾರ್ ಅವರೂ ಇದ್ದರು.
ದೂರು ಬಂದರೆ ನೋಟಿಸ್: ತೊಂದರೆಗೆ ಈಡಾದ ವಿದ್ಯಾರ್ಥಿನಿಯರಾಗಲಿ, ಅವರ ಹೆತ್ತವರಾಗಲಿ, ಏಟು ನೀಡಿದವರಾಗಲಿ, ಏಟು ತಿಂದವರಾಗಲಿ ಯಾರೂ ದೂರು ನೀಡಿಲ್ಲ. ಆ ಉಪನ್ಯಾಸಕ ಸಂಪರ್ಕಕ್ಕೂ ಸಿಕ್ಕಿಲ್ಲ. ದೂರು ಬಂದರೆ ಆ ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಅವರಿಂದ ಉತ್ತರ ಪಡೆದು ಮೇಲಧಿಕಾರಿಗಳಿಗೆ ಬರೆಯಲಾಗುವುದು ಎಂದು ಪ್ರಾಂಶುಪಾಲ ಪ್ರೊ. ತೂ.ಕ. ಶಂಕರಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.