ದಾವಣಗೆರೆ: ದಾವಣಗೆರೆಯಲ್ಲಿ ಹಾದು ಹೋಗಿರುವ ಮಲ್ಪೆ – ಮೊಳಕಾಲ್ಮುರು ರಾಜ್ಯ ಹೆದ್ದಾರಿ-65ನ ಶಿರಮಗೊಂಡನಹಳ್ಳಿಯಿಂದ ಹದಡಿವರೆಗಿನ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು. ಶಾಸಕ ಎಸ್.ಎ. ರವೀಂದ್ರನಾಥ್ ಅವರು ಸಾಥ್ ನೀಡಿದರು.
ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿ, ‘ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಅಪೆಂಡಿಕ್ಸ್ ‘ಇ’ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದು, 6 ಕಿ.ಮೀ. ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.
ರಸ್ತೆ ಅಭಿವೃದ್ಧಿಗೆ ಈ ಹಿಂದೆಯೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಕೈಗೊಳ್ಳಲಿಲ್ಲ. ಇದೀಗ 7 ಮೀಟರ್ ವಿಸ್ತರಿಸಲು ಒಪ್ಪಿಗೆ ದೊರೆತಿದೆ. 10 ಮೀಟರ್ ವಿಸ್ತರಣೆಗೆ ಸಚಿವರೊಂದಿಗೆ ಮಾತನಾಡುತ್ತೇನೆ ಎಂದ ಅವರು ಇದಕ್ಕೆ ರವೀಂದ್ರನಾಥ್ ಅವರೂ ಸಹಕರಿಸಬೇಕು’ ಎಂದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ‘ಈ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯನ್ನು ಇನ್ನಷ್ಟು ವಿಸ್ತರಿಸಿ ಇದಕ್ಕೆ ನನ್ನ ಸಹಕಾರವೂ ಇದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ.ನಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಮಂಜಪ್ಪ, ಬಿಜೆಪಿ ಮುಖಂಡರಾದ ಶಿವರಾಜ್ ಪಾಟೀಲ್, ಬಿ.ಜಿ.ಸಿದ್ದೇಶ್, ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ವಿಜಯಕುಮಾರ್, ಉಪಾಧ್ಯಕ್ಷೆ ವೀಣಾ ಎಸ್.ಎಂ.ವಿಜಯಕುಮಾರ್, ಎಸ್.ಎಂ.ರುದ್ರೇಶ್, ಎಸ್.ಬಿ.ಚಂದ್ರಪ್ಪ, ಎಸ್.ಎ. ಬಸವರಾಜಪ್ಪ, ಕೆ.ಜೆ.ರಾಘವೇಂದ್ರ, ಎಸ್.ಕೆ. ಮಾಲತೇಶ್, ಗುಡ್ಡಪ್ಪ, ನೀಲಪ್ಪ, ಕೆ.ಎಸ್. ರೇವಣಸಿದ್ದಪ್ಪ, ಮಹಾರುದ್ರಾಚಾರಿ, ನೀಲಗಿರಿ ನಾಗರಾಜಪ್ಪ, ಕೆ.ಬಿ.ಮಹಾದೇವಪ್ಪ, ಹಾವಿನ ಗುರುಶಂಕರ್, ಗೌಡ್ರು ಓಂಕಾರಪ್ಪ, ಎ.ಕೆ.ರುದ್ರಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಾದೇವಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.