ಹರಿಹರ:ನಗರದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಶೇರಾಪುರದ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಹೊರವಲಯದಲ್ಲಿರುವ ನಿರ್ಮಾಣಗೊಳ್ಳುತ್ತಿರುವ ವಸತಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಸಂಸದ ಹಾಗೂ ಶಾಸಕರೊಂದಿಗೆ ಭಾನುವಾರ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸುಮಾರು 50 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ಕಾಮಗಾರಿಗೆ ಕಳೆದ ಜನವರಿಯಲ್ಲಿ ಯೋಜನೆ ಕಾಮಗಾರಿ ಚಾಲನೆ ನೀಡಲಾಗಿತ್ತು. ಈ ಯೋಜನೆಯಲ್ಲಿ 650 ನಿವೇಶನಗಳು ಸಿದ್ಧವಾಗುತ್ತಿದ್ದು, ಈಗಾಗಲೇ ನಿವೇಶನಗಳಿಗಾಗಿ 33 ಸಾವಿರ ಬೇಡಿಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿದಾರರಿಗೆ ಕಾನೂನಿನ ಚೌಕಟ್ಟಿನಲ್ಲಿ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಯೋಜನೆಯ ವಿವರ: ನಗರದ ಹೊರ ವಲಯದ ಶೇರಾಪುರದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಯೋಜನೆ ಸುಮಾರು 49ಎಕರೆ 18 ಗುಂಟೆ (ಕರಾಬು ಹೊರತುಪಡಿಸಿ) ಪ್ರದೇಶದಲ್ಲಿ ₹ 25.05 ಕೋಟಿ ಯೋಜನೆಯಾಗಿದೆ. 2,00,117 ಚದುರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ.
ಈಡಬ್ಲ್ಯೂಎಸ್ 111, ಎಲ್ಐಜಿ 196, ಎಂಐಜಿ 194, ಎಚ್ಐವಿಜಿ 83, ಎಚ್ಐಜಿ 72 ಒಟ್ಟು 656 ನಿವೇಶನಗಳು ಕರ್ನಾಟಕ ಗೃಹ ಮಂಡಳಿಯಿಂದ ಸಿದ್ಧಪಡಿಸಲಾಗುತ್ತಿದೆ. ಯೋಜನೆಯನ್ನು ಮೈಸೂರಿನ ಮೇ ಕೆವಿಸಿಎಚ್ಎಸ್ಆರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.
ಜಮೀನಿನಲ್ಲಿ ನೀರು: ಯೋಜನೆಯ ಅಕ್ಕಪಕ್ಕದ ಜಮೀನಿನಲ್ಲಿ ನೀರು ನಿಲ್ಲುತ್ತಿದ್ದು, ನೀರು ಸರಗಾವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ರೈತರಾದ ರಂಗನಾಥ್, ಓಂಕಾರಪ್ಪ, ಕರಬಸಪ್ಪ ಮತ್ತು ರಾಜಶೇಖರ್ ಮನವಿ ಸಲ್ಲಿಸಿದರು.
ತೋಟದ ಸ್ಥಳ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಗೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್, ನಗರಸಭೆ ಅಧ್ಯಕ್ಷ ರತ್ನಾ ಡಿ. ಉಜ್ಜೇಶ್, ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ಸದಸ್ಯರಾದ ಅಶ್ವಿನಿ ಕೃಷ್ಣ, ಪಿ.ಎನ್. ವಿರೂಪಾಕ್ಷ, ಎನ್. ರಜನಿಕಾಂತ್, ಸೈಯದ್ ಅಬ್ದುಲ್ ಅಲೀಂ, ದಾದಾ ಕಲಂದರ್, ಮುಖಂಡರಾದ ಚಂದ್ರಶೇಖರ್ ಪೂಜಾರ್, ದಾದಾಪೀರ್ ಭಾನುವಳ್ಳಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಕರ್ನಾಟಕ ಗೃಹ ಮಂಡಳಿ ಇಇ ನಂಜುಂಡಸ್ವಾಮಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.