ADVERTISEMENT

ಸಮಾರಂಭಗಳಲ್ಲಿ ಭಾಗಿ, ಮನೆಯವರೊಂದಿಗೆ ವಿಶ್ರಾಂತಿ ಪಡೆದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:26 IST
Last Updated 24 ಏಪ್ರಿಲ್ 2019, 20:26 IST
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಬುಧವಾರ ಕುಟುಂಬದ ಸದಸ್ಯರೊಂದಿಗೆ ಹರಟುತ್ತಾ ಕಾಲ ಕಳೆದರು
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಬುಧವಾರ ಕುಟುಂಬದ ಸದಸ್ಯರೊಂದಿಗೆ ಹರಟುತ್ತಾ ಕಾಲ ಕಳೆದರು   

ದಾವಣಗೆರೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಳ್ಳಿ, ಹಳ್ಳಿಗಳನ್ನು ಸುತ್ತಿ ಪ್ರಚಾರ ಮಾಡಿ, ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಬುಧವಾರ ವಿಶ್ರಾಂತಿ ಪಡೆದರು.

ಬೆಳಿಗ್ಗೆ ಬೇಗ ಎದ್ದು 1 ಗಂಟೆ ವಾಕಿಂಗ್‌ ಮಾಡಿದ ಅವರು, ಬಳಿಕ 1 ಗಂಟೆ ದಿನಪತ್ರಿಕೆಗಳನ್ನು ಓದಿದರು. ಬಳಿಕ ಮನೆಗೆ ಬಂದ ಶಾಸಕರು, ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಮನೆಗೆ ಬಂದ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ADVERTISEMENT

ಬಹುದಿನಗಳ ಬಳಿಕ ಕುಟುಂಬದ ಸದಸ್ಯರೊಂದಿಗೆ ಹರಟುತ್ತಾ ಉಪಾಹಾರ, ಊಟ ಮಾಡಿದರು. ಬಳಿಕ ಕೋಮಾರನಹಳ್ಳಿಯಲ್ಲಿನ ಪರಿಚಿತರ ಮದುವೆ ಸಮಾರಂಭದಲ್ಲಿ ಭಾಗಿಯಾದರು. ನಂತರ ನಗರದಲ್ಲಿ ನಡೆದ ಸ್ನೇಹಿತರ ಕುಟುಂಬದ ಉಪನಯನ ಸಮಾರಂಭದಲ್ಲಿ ಹಾಜರಾದರು, ಮಧ್ಯಾಹ್ನ ಆತ್ಮೀಯರೊಬ್ಬರ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾದರು.

ಸಂಜೆ ಮತ್ತೆ ಮನೆಗೆ ಬಂದ ಕಾರ್ಯಕರ್ತರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಮತಪೆಟ್ಟಿಗೆಗಳನ್ನು ಇರಿಸಿರುವ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದರು.

‘ಎಲ್ಲೆಡೆ ಬಿಜೆಪಿ ಪರ ಒಲವಿದೆ. ದಾವಣಗೆರೆ ಉತ್ತರ, ದಕ್ಷಿಣ ಸೇರಿ ಹರಪನಹಳ್ಳಿ, ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳಿಗೆ ಕುಟುಂಬದವರು, ಮುಖಂಡರು ಭೇಟಿ ನೀಡಿದ್ದು, ಎಲ್ಲೆಡೆ ಬಿಜೆಪಿ ಪರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಬಾರಿ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.