ದಾವಣಗೆರೆ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ವಿಜ್ಞಾನ ಕ್ಷೇತ್ರದಲ್ಲಿ ಬೆಳೆಸಲು ನಡೆಸುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹಕ್ನ್ ಯೋಜನಾ (ಕೆವಿಪಿವೈ) ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ನಗರದ ಸರ್ ಎಂ.ವಿ. ಪದವಿ ಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.
ರ್ಯಾಂಕ್ ಪಡೆದ ದ್ವಿತೀಯ ಪಿ.ಯು. ವಿದ್ಯಾರ್ಥಿಗಳಾದ ಟಿ.ಎಚ್. ಭರತೇಶ್ (108ನೇ ರ್ಯಾಂಕ್), ಸಾಯಿ ಸಂಜಯ್ ಎಸ್.ಆರ್. (174), ವಿನಯಕುಮಾರ್ (210), ರಮ್ಯಾಶ್ರೀ ಡಿ.ವಿ. (910), ಧೀರಜ್ ಎಚ್.ಜೆ. (1295), ರಾಹುಲ್ ಸಿ. ಗಂಗನಗೌಡ (4018), ಮೋಹನ್ ಕುಮಾರ್ ಎನ್. (4433), ಎಚ್. ಅಭಿಷೇಕ್ (4706), ದೀಪನ್ ಎಂ.ಜೆ. (4797), ಪ್ರಥಮ ಪಿಯು ವಿದ್ಯಾರ್ಥಿಗಳಾದ ಶ್ರೀನಿವಾಸ ಬಿ. ಮಾಲಿ ಪಾಟೀಲ(2000) ಹಾಗೂ ಶ್ರೇಯಸ್ ಉಜ್ಜನಿ
ಮಠದ (1418) ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
‘ದೇಶದಲ್ಲಿ 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 5 ಸಾವಿರ ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಆ ಐದು ಸಾವಿರದಲ್ಲಿ ನಮ್ಮ ವಿದ್ಯಾ ಸಂಸ್ಥೆಯ 11 ಮಂದಿ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ’ ಎಂದು ಸಂಸ್ಥೆಯ ಅಧ್ಯಕ್ಷ ಡಾ. ವಿ. ರಾಜೇಂದ್ರ ನಾಯ್ಡು ತಿಳಿಸಿದರು.
ಮುಂದಿನ ವರ್ಷ 25ರಿಂದ 30 ವಿದ್ಯಾರ್ಥಿಗಳು ಕೆವಿಪಿವೈಗೆ ಆಯ್ಕೆಯಾಗಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆಯ್ಕೆಯಾದವರಿಗೆ ಶುದ್ಧ ವಿಜ್ಞಾನ ಕಲಿಕೆಗೆ ₹ 80 ಸಾವಿರ ಸ್ಕಾಲರ್ಶಿಪ್ ದೊರೆಯಲಿದೆ ಎಂದು ವಿವರಿಸಿದರು.
ಮಧ್ಯ ಕರ್ನಾಟಕ ಭಾಗದಲ್ಲಿ ಇಷ್ಟು ಪ್ರಮಾಣದಲ್ಲಿ ಕೆವಿಪಿವೈ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಏಕೈಕ ವಿದ್ಯಾಸಂಸ್ಥೆ ಸರ್ ಎಂ.ವಿ. ಪಿಯು ಕಾಲೇಜು ಆಗಿದೆ. ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುತ್ತಿರುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಪರಿಣಾಮ ಈ ಫಲಿತಾಂಶ ಬಂದಿದೆ ಎಂದು ಶೈಕ್ಷಣಿಕ ನಿರ್ದೇಶಕ ಸೈಯದ್ ಸಂಶೀರ್ ಹೇಳಿದರು.
ಪ್ರಾಂಶುಪಾಲರಾದ ಶ್ರೀಕಾಂತ್, ದೇವರಾಜ್, ಉಪಪ್ರಾಂಶುಪಾಲ ಸುರೇಶ್ ಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಪ್ರಾಧ್ಯಾಪಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.