ಹೆಬ್ಬಳಗೆರೆ (ಚನ್ನಗಿರಿ): ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆಯಿಂದ ಎರಡೂ ಜಿಲ್ಲೆಗಳ ರೈತರ ಬದುಕು ಹಸನಾಗಲು ಸಹಕಾರಿಯಾಗಿದೆ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ಉಬ್ರಾಣಿ ಏತ ನೀರಾವರಿ ಮುಂದುವರಿದ ಯೋಜನೆ ಅಡಿ ತುಂಬಿದ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಉಬ್ರಾಣಿ ಹೋಬಳಿಯ 90ಕ್ಕಿಂತ ಹೆಚ್ಚು ಕೆರೆಗಳಿಗೆ ಭದ್ರಾ ನದಿಯ ನೀರನ್ನು ಪೈಪ್ಗಳ ಮೂಲಕ ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವು ಕೆರೆಗಳು ಕೈ ಬಿಟ್ಟು ಹೋಗಿದ್ದವು. ನಂತರ ಮುಂದುವರಿದ ಕಾಮಗಾರಿ ನಡೆಸಿ, ಪೈಪ್ಗಳ ಮೂಲಕ ಹೆಬ್ಬಳಗೆರೆ, ವಡ್ನಾಳ್ ಹಾಗೂ ಬೆಂಕಿಕೆರೆ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹಾಗೆಯೇ ಮುಂದಿನ ಹಂತದಲ್ಲಿ ಹೊದಿಗೆರೆ ಕೆರೆಯನ್ನು ತುಂಬಿಸಲಾಗುತ್ತದೆ. ಕೆರೆಗಳು ತುಂಬಿರುವುದರಿಂದ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೇಸಿಗೆಯಲ್ಲಿ ನೀರಿನ ತೊಂದರೆ ತಪ್ಪಲಿದೆ ಎಂದರು.
ಅದೇ ರೀತಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಹೊನ್ನಾಳಿಯಲ್ಲಿ ಕೆಲವು ರೈತರು ಕಾಮಗಾರಿಗೆ ಅಡ್ಡಿಪಡಿಸಿದ್ದರು. ಈಗ ಸಮಸ್ಯೆ ಬಗೆಹರಿಸಲಾಗಿದೆ. ಮೂರು ಅಥವಾ ನಾಲ್ಕು ತಿಂಗಳಲ್ಲಿ ಮೊದಲನೇ ಹಂತದ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಯೋಜನೆ ಅಡಿ ತಾಲ್ಲೂಕಿನ ಕಸಬಾ ಮತ್ತು ಸಂತೇಬೆನ್ನೂರು ಹೋಬಳಿಯ 90ಕ್ಕಿಂತ ಹೆಚ್ಚು ಕೆರೆಗಳು ತುಂಬಲಿವೆ ಎಂದು ಹೇಳಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ವಡ್ನಾಳ್, ಹೆಬ್ಬಳಗೆರೆ, ಬೆಂಕಿಕೆರೆ ಹಾಗೂ ಹೊದಿಗೆರೆ ಗ್ರಾಮದ ಕೆರೆಗಳನ್ನು ಮುಂದುವರಿದ ಕಾಮಗಾರಿ ಅಡಿ ತುಂಬಿಸಲು ₹ 11.50 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕಾಮಗಾರಿ ಮುಗಿದಿದ್ದು, ವಡ್ನಾಳ್, ಹೆಬ್ಬಳಗೆರೆ ಮತ್ತು ಬೆಂಕಿಕರೆ ಗ್ರಾಮದ ಕೆರೆಗಳು ತುಂಬಿವೆ. ಇನ್ನು ಹೊದಿಗೆರೆ ಗ್ರಾಮದ ಕೆರೆಗೆ ಹೋಗುವ ಪೈಪ್ ಹೊಡೆದು ಹೋಗಿದ್ದು ಶೀಘ್ರದಲ್ಲಿ ಹೊಸ ಪೈಪ್ ಅಳವಡಿಸಿ ಕೆರೆಯನ್ನು ತುಂಬಿಸಲಾಗುವುದು ಎಂದು ಹೇಳಿದರು.
ಹೆಬ್ಬಳಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉಮೇಶ್, ಕೆ.ಸಿ. ಕೆಂಚಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಬಸವರಾಜಪ್ಪ, ಹನುಮಂತಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.