ADVERTISEMENT

ಅಂತರ್ಜಾತಿಯೇ ಒಂದು ಜಾತಿಯಾಗುತ್ತಿದೆ

‘ಮತ್ತೆ ಕಲ್ಯಾಣ’ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:22 IST
Last Updated 23 ಆಗಸ್ಟ್ 2019, 9:22 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ದಾವಣಗೆರೆ: ‘ಅಂತರ್ಜಾತಿ ಮದುವೆಯಾದರೆ ಜಾತಿ ನಿರ್ಮೂಲನೆಯಾಗುತ್ತದೆ ಎಂಬುದೇ ಒಂದು ಭ್ರಮೆ. ಅಂತರ್ಜಾತಿಯವರೇ ಒಂದು ಜಾತಿಯವರಾಗುತ್ತಿದ್ದಾರೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಹಮತ ವೇದಿಕೆ ಆಶ್ರಯದಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಗುರುವಾರ ಇಲ್ಲಿ ನಡೆದ ಸಂವಾದದಲ್ಲಿ ‘ಅಂತರ್ಜಾತಿ ವಿವಾಹಕ್ಕೆ ಮತ್ತೆ ಕಲ್ಯಾಣ ಚಳವಳಿ ಯಾವ ರೀತಿ ಪ್ರೋತ್ಸಾಹ ನೀಡುತ್ತದೆ’ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

‘ಶರಣ ಧರ್ಮಕ್ಕೆ ಬನ್ನಿ. ಇಲ್ಲಿಗೆ ಬಂದರೆ ಯಾವ ಜಾತಿಯೂ ಇಲ್ಲ. ಶರಣರೆಲ್ಲ ಒಂದೇ. ಯಾರು ಯಾರನ್ನೂ ಬೇಕಾದರೂ ಮದುವೆಯಾಗಬಹುದು’ ಎಂದರು.

ADVERTISEMENT

‘ಬ್ರಾಹ್ಮಣ ಮಧುವರಸನ ಮಗಳು, ಸಮಗಾರ ಹರಳಯ್ಯನ ಮಗನಿಗೆ ಬಸವಣ್ಣ ಅಂತರ್ಜಾತಿ ಮದುವೆ ಮಾಡಿದ್ದಲ್ಲ. ಅವರಿಬ್ಬರೂ ಲಿಂಗ ಕಟ್ಟಿ ಲಿಂಗವಂತರಾಗಿ ಶರಣ ಧರ್ಮಕ್ಕೆ ಬಂದಿದ್ದರಿಂದ ಅವರ ಮದುವೆ ನಡೆಯಿತು’ ಎಂದು ವಿಶ್ಲೇಷಿಸಿದರು.

‘ಮಠ, ಮಂದಿರಗಳಲ್ಲಿ ರಾಜಕಾರಣಿಗಳು, ಶ್ರೀಮಂತರಿಗೆ ಬೇಗನೆ ದರ್ಶನದ ಅವಕಾಶ ಸಿಗುತ್ತದೆ. ಬಡವರಿಗೆ ಸಿಗುವುದಿಲ್ಲ. ಈ ರೀತಿ ವ್ಯತ್ಯಾಸ ಏಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ‘ಮೊದಲು ದೇವಸ್ಥಾನಗಳಿಗೆ ಹೋಗುವ ಭ್ರಮೆಯಿಂದ ಹೊರಬನ್ನಿ. ತಾರತಮ್ಯ ಇರುವಲ್ಲಿಗೆ ನೀವು ಹೋಗದಿದ್ದರೆ ಅವರು ಅಂಗಡಿ ಬಂದ್‌ ಮಾಡಬೇಕಾಗುತ್ತದೆ. ಮಠಗಳಲ್ಲಿ ಕೂಡ ಇದೇ ತಾರತಮ್ಯ ಇದ್ದರೆ ಅಲ್ಲಿಗೂ ಹೋಗಬೇಡಿ. ಜನರೇ ಬರಲ್ಲ ಎಂದರೆ ಕೊನೆಗೆ ಅವರೇ ನಿಮ್ಮಲ್ಲಿಗೆ ಬರುವರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.