ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣವನ್ನು ಸಂಪರ್ಕಿಸಿ ಹೋಗುವ ಮೂರು ರೈಲುಗಳು ಆರಂಭಗೊಂಡಿವೆ. ಜನರು ನಿಧಾನವಾಗಿ ಸ್ಪಂದನೆ ನೀಡಲು ಆರಂಭಿಸಿದ್ದಾರೆ. ಟಿಕೆಟ್ ಬುಕ್ಗೆ ಮಾಡಲು ಜನ ಸರದಿಯಲ್ಲಿ ನಿಂತಿರುವುದು ಮಂಗಳವಾರ ಕಂಡು ಬಂತು.
ಬೆಂಗಳೂರು–ಬೆಳಗಾವಿ ರೈಲು ವಾರಕ್ಕೆ ಮೂರು ದಿನ ಸಂಚರಿಸುತ್ತದೆ. ಹಾಗಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಹಾಗೂ ಮಂಗಳವಾರ, ಗುರುವಾರ, ಶನಿವಾರ ಬೆಳಗಾವಿಯಿಂದ ಬೆಂಗಳೂರು ಕಡೆಗೆ ರೈಲು ಸಂಚರಿಸುತ್ತಿದೆ. ಬೆಳಿಗ್ಗೆ 12.45ಕ್ಕೆ ದಾವಣಗೆರೆ ನಿಲ್ದಾಣಕ್ಕೆ ಈ ರೈಲು ತಲುಪುತ್ತಿದೆ.
ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ರೈಲು ಪ್ರತಿದಿನ ಸಂಚರಿಸುತ್ತಿದ್ದು, ಬೆಳಿಗ್ಗೆ 10.50ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ತಲುಪುತ್ತಿದೆ.
ಯಶವಂತಪುರ–ದೆಹಲಿಯ ಹಝರತ್ ನಿಜಾಮುದ್ದೀನ್ ನಡುವೆ ಓಡುವ ಸಂಪರ್ಕ್ ಕ್ರಾಂತಿ ರೈಲು ವಾರಕ್ಕೆ ಎರಡುಬಾರಿ ಸಂಚರಿಸುತ್ತಿದೆ. ಮಂಗಳವಾರ ಮತ್ತು ಗುರುವಾರ ಬೆಂಗಳೂರು ಕಡೆಗೆ ಹಾಗೂ ಬುಧವಾರ ಮತ್ತು ಶನಿವಾರ ಬೆಂಗಳೂರಿನಿಂದ ದೆಹಲಿ ಕಡೆಗೆ ತೆರಳುತ್ತಿದೆ.
ಈ ಮೂರು ರೈಲುಗಳಲ್ಲಿ ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೋಗಲು ಹೆಚ್ಚು ಪ್ರಯಾಣಿಕರಿದ್ದು, ಹುಬ್ಬಳ್ಳಿ, ಬೆಳಗಾವಿ ಕಡೆಗೆ ಹೋಗುವವರ ಸಂಖ್ಯೆ ಕಡಿಮೆ ಇದೆ.
ಮೊದಲ ದಿನಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜನ ನಿಧಾನವಾಗಿ ಓಡಾಟ ಆರಂಭಿಸುತ್ತಿದ್ದಾರೆ ಎಂದು ದಾವಣಗೆರೆ ಸ್ಟೇಷನ್ ಮ್ಯಾನೇಜರ್ ಸುಬ್ರಹ್ಮಣ್ಯೇಶ್ವರ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.