ಹರಿಹರ: ಸ್ಥಳೀಯ ಕುಸ್ತಿ ಜೀರ್ಣೋದ್ಧಾರ ಸಮಿತಿ ಮತ್ತು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಸಹಯೋಗದಲ್ಲಿ ಜ.11 ಮತ್ತು 12ರಂದು ನಗರದ ಗಾಂಧಿ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ತಿಳಿಸಿದರು.
ನಗರದ ಗಾಂಧಿ ಮೈದಾನದ ಕುಸ್ತಿ ಅಖಾಡದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕನಕದಾಸರ 534ನೇ ಜಯಂತ್ಯುತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಿದ್ದು, ಮುಂದಿನ ಐದು ವರ್ಷಗಳ ಕಾಲ ಸತತವಾಗಿ ಪಂದ್ಯಾವಳಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
ಪಂದ್ಯಾವಳಿಯನ್ನು ಜ.10ರಿಂದಲೇ ಆರಂಭಿಸಬೇಕಿತ್ತು. ಆದರೆ, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಆಗಮಿಸಿರುವ ಕುಸ್ತಿಪಟುಗಳ ಸ್ವವಿವರ ಮತ್ತು ತೂಕದ ಮಾಹಿತಿ ಪಡೆಯುವುದು ವಿಳಂಬವಾಗಿದ್ದರಿಂದ ಜ.11ರಿಂದ ಎರಡು ದಿನಗಳ ಕಾಲ ಪಂದ್ಯಾವಳಿ ನಡೆಸಲಾಗುವುದು. ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯರ ವಿಭಾಗದಲ್ಲಿನ ವಿಜೇತರಿಗೆ ಶ್ರೀ ಹರಿಹರ ಕಿಶೋರ ಪ್ರಶಸ್ತಿ (61 ಕೆ.ಜಿ.), ಶ್ರೀ ಹರಿಹರ ಕುಮಾರ ಪ್ರಶಸ್ತಿ (74 ಕೆ.ಜಿ.), ಶ್ರೀ ಹರಿಹರ ಕೇಸರಿ ಪ್ರಶಸ್ತಿ (86 ಕೆ.ಜಿ.), ಶ್ರೀ ಕನಕ ಕಂಠೀರವ ಪ್ರಶಸ್ತಿ (+86 ಕೆ.ಜಿ.), 17 ವರ್ಷದವರ ವಿಭಾಗದ ವಿಜೇತರಿಗೆ ಶ್ರೀ ಹರಿಹರೇಶ್ವರ ಪ್ರಶಸ್ತಿ, 17 ವರ್ಷದವರ ಬಾಲಕಿಯರ ವಿಭಾಗದ ವಿಜೇತರಿಗೆ ಬಚ್ಚಮ್ಮ ತಾಯಿ ಪ್ರಶಸ್ತಿ, ಮಹಿಳಾ ವಿಭಾಗದ ವಿಜೇತರಿಗೆ ಕಿತ್ತೂರರಾಣಿ ಚನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಚೂರಿ ಜಗದೀಶ್, ಸುರೇಶ್ ಚಂದಾಪುರ್, ಸ್ಟಾರ್ ಈರಣ್ಣ, ಶಿವಾನಂದ ವೈ, ರೇವಣಪ್ಪ ದ್ಯಾವನಾಯ್ಕರ್, ಮಾರುತಿ ಪೂಜಾರ್, ವಿಜಯ ರಟ್ಟಿಹಳ್ಳಿ, ಅಣ್ಣಪ್ಪ ಶಾವಿ, ಕೆ.ಜಿ. ಸಿದ್ದೇಶ್, ಮಹೇಶ ಪೂಜಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.