ದಾವಣಗೆರೆ: ಪದವಿ ಪೂರ್ವ ಕಾಲೇಜುವರೆಗಿನ ವಿದ್ಯಾರ್ಥಿ ಜೀವನವೇ ಆನಂತರದ 10 ವರ್ಷಗಳ ಬಳಿಕ ನೀವೇನಾಗುವಿರಿ ಎಂಬುದನ್ನು ನಿರ್ಧರಿಸುವ ಸಮಯ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಸಮಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಸಿದ್ಧಗಂಗಾ ಮಾತಾ ಎಜುಕೇಶನಲ್ ಅಸೋಸಿಯೇಶನ್ನಿಂದ ಸಿದ್ಧಗಂಗಾ ವಿದ್ಯಾಸಂಸ್ಥೆಗಳ 50ನೇ ವಾರ್ಷಿಕ ಸಂಭ್ರಮ, ಸಿದ್ಧಗಂಗಾ ಪ್ರತಿಭಾ ಪುರಸ್ಕಾರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಸೋಮವಾರ ಅವರು ಮಾತನಾಡಿದರು.
ಶಾಲೆಯ ಕಟ್ಟಡ, ಸಾಮಗ್ರಿಗಳು ಚೆನ್ನಾಗಿದ್ದರೆ ಶಿಕ್ಷಣದ ಗುಣಮಟ್ಟ ಚೆನ್ನಾಗಿದೆ ಎಂಬುದು ಅರ್ಥವಲ್ಲ. ಶಾಲೆ ನಡೆಸುವವರು, ಶಿಕ್ಷಕರು ಯಾವ ರೀತಿಯ ಶಿಕ್ಷಣ ನೀಡುತ್ತಿದ್ದಾರೆ ಎಂಬುದರ ಮೇಲೆ ಗುಣಮಟ್ಟ ನಿರ್ಧಾರವಾಗುತ್ತದೆ. ಸೂಪರ್ ಪವರ್ ದೇಶದ ಸೂಪರ್ ಕಂಪ್ಯೂಟರ್ಗಳು ಅಂದರೆ ವಿದ್ಯಾರ್ಥಿಗಳು. ಸಾಧಕರು ಯಾರೇ ಬಂದರೂ ಗೌರವಕೊಡಿ. ಅವರಿಗಿಂತ ಒಂದು ಗೇಣು ಹೆಚ್ಚು ಸಾಧನೆ ಮಾಡುವುದಾಗಿ ಮನಸ್ಸಿನಲ್ಲೇ ಪಣತೊಡಿ. ಸಾಧಕರು ಬಂದಾಗ ಸೆಲ್ಫಿ ತೆಗೆದುಕೊಳ್ಳುವುದಕ್ಕಿಂತ ಇದು ಉತ್ತಮ ಎಂದು ಸಲಹೆ ನೀಡಿದರು.
‘ಬಹಳ ಬಾರಿ ನಾವು ಮೇಲ್ನೋಟಕ್ಕೆ ಕಾಣುವುದರ ಮೇಲೆ ಶಾಲೆ, ಸಂಘ ಸಂಸ್ಥೆಗಳ ಗುಣಮಟ್ಟವನ್ನು, ಜನರ ವ್ಯಕ್ತಿತ್ವವನ್ನು ನಿರ್ಧರಿಸುತ್ತೇವೆ. ಆದರೆ ವಾಸ್ತವ ಬೇರೆ ಇರುತ್ತದೆ. ಸೂಟ್ಬೂಟು ಇದ್ದ ವ್ಯಕ್ತಿಯನ್ನು ಮತ್ತು ಸಾಮಾನ್ಯ ಬಟ್ಟೆ ಹಾಕಿಕೊಂಡ ವ್ಯಕ್ತಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಅಳೆಯುತ್ತೇವೆ. ಆದರೆ, ನಿಜ ಏನು ಎಂಬುದು ಅವರ ಸಾಧನೆ, ನಿಲುವುಗಳಿಂದ ಗೊತ್ತಾಗುತ್ತದೆ’ ಎಂದರು.
‘ಸ್ವಾವಲಂಬನೆ, ಸ್ವಯಂಶಿಸ್ತು, ಆತ್ಮಗೌರವ ಈ ಮೂರು ಪ್ರತಿ ಮನುಷ್ಯನಿಗೆ ಇರಬೇಕು. ನಾನು ಯಾರು? ಯಾಕೆ ಬಂದೆ? ಏನು ಮಾಡುತ್ತಿರುವೆ ಎಂದು ಪ್ರತಿ ಕ್ಷಣ ಎಲ್ಲರೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಿದ್ಧಗಂಗಾ ಪದವಿಪೂರ್ವ ಕಾಲೇಜು ನಿರ್ದೇಶಕ ಡಾ. ಜಯಂತ್ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಸಿದ್ಧಗಂಗಾ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಕೆ.ಎಸ್. ರೇಖಾರಾಣಿ, ಮಾಯಕೊಂಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನಸ್ರಿನ್ ಬಾನು, ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಸಂಸ್ಥಾಪಕ ಎಂ.ಎಸ್. ಶಿವಣ್ಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.