
ಟಿ.ಗೋಪಗೊಂಡನಹಳ್ಳಿ (ನ್ಯಾಮತಿ): ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವು ಮಂಗಳವಾರ ತರಕಾರಿ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿತ್ತು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು, ಹೂವು, ವಿವಿಧ ಕಾಳುಗಳನ್ನು ತಂದು ಶಾಲೆಯ ಆವರಣದಲ್ಲಿ ಮಾರಾಟ ಮಾಡುವ ಮೂಲಕ ಸಂತೆಯ ಪರಿಕಲ್ಪನೆಯೊಂದಿಗೆ ಸಂಭ್ರಮಿಸಿದರು.
ಸಂತೆಯಲ್ಲಿ ವ್ಯಾಪಾರಿಗಳು ಕೂಗುವ ಮಾದರಿಯಲ್ಲೇ ವಿದ್ಯಾರ್ಥಿಗಳು ಗ್ರಾಹಕರನ್ನು ಕೂಗಿ ಕರೆದರು. ಸಾರ್ವಜನಿಕರು, ಪೋಷಕರು, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಳಿ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಿದರು.
‘ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಜೊತೆಗೆ ಗಣಿತ ಕಲಿಕೆಗೆ ಸಹಕಾರಿಯಾಗಲೆಂದು ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು’ ಎಂದು ಶಾಲೆಯ ಮುಖ್ಯಶಿಕ್ಷಕ ಎಚ್.ರವಿಕುಮಾರ ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಪರಶುರಾಮಪ್ಪ, ಸದಸ್ಯರು, ಚೀಲೂರು ತರಕಾರಿ ವ್ಯಾಪಾರಿ ಅಮ್ಜದ್ಬೇಗ್, ಸಹಶಿಕ್ಷಕರಾದ ಕವಿತಾ, ಸುನಿತಾ, ಷಣ್ಮುಖ, ಶಿಲ್ಪಾ, ತೇಜಸ್ವಿನಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.