ADVERTISEMENT

ಬಸ್ಸಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ, ಬಸ್‌ ಓಡಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 6:45 IST
Last Updated 19 ಫೆಬ್ರುವರಿ 2021, 6:45 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸ್ಪಂದನ (ಸಂಪರ್ಕ) ಸಭೆ ವೇಳೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು–ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸ್ಪಂದನ (ಸಂಪರ್ಕ) ಸಭೆ ವೇಳೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು–ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್   

ದಾವಣಗೆರೆ: ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮತ್ತು ಮನೆಗೆ ಹೋಗುವ ಸಮಯದಲ್ಲಿ ಬಸ್‌ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಕೂಡಲೇ ಬಸ್‌ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ತ್ಯಾವಣಿಗೆ, ಮತ್ತಿ, ಬೆಳಲಗೆರೆ, ಮಿಯಾಪುರ, ನಲ್ಕುದುರೆ, ಕದರನಹಳ್ಳಿ, ಗೋಣಿವಾಡ, ಅರೇಹಳ್ಳಿ, ಹೂವಿನಮಡು, ಕಾರಿಗನೂರು, ಕುಕ್ಕುವಾಡ, ಹದಡಿ ಸುತ್ತಮುತ್ತಲಿನ ನಿವಾಸಿಗಳಾಗಿರುವ ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇರೋ ಬಸ್ಸಿನಲ್ಲಿ 180 -200 ಮಂದಿಯನ್ನು ತುಂಬಿಸಿಕೊಂಡು ಬರುತ್ತಾರೆ. ಕೆರೆಬಿಳಚಿ ಮತ್ತು ತ್ಯಾವಣಿಗೆಯಿಂದ ಇದ್ದ ಎರಡು ಬಸ್‌ಗಳನ್ನು ರದ್ದು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಸ್ ಇಲ್ಲದ ಕಾರಣ ಪಾಸ್ ಪ್ರಯೋಜನಕ್ಕೆ ಬಂದಿಲ್ಲ. ಕೆರೆಬಿಳಚಿ ಮತ್ತು ತ್ಯಾವಣಿಗೆಗೆ ಬೆಳಿಗ್ಗೆ ಎರಡು ಬಸ್‌ ಮತ್ತು ಸಂಜೆ ಎರಡು ಬಸ್‌ಗಳನ್ನು ಓಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹೈದರಾಲಿಖಾನ್‌, ರೋಹಿತ್‌, ರಮೇಶ್‌, ಲಿಂಗರಾಜ್‌, ಪ್ರಕಾಶ್‌, ಅರಬಿಯ ಬಾನು, ಉಮೇ ರುಮಾನ್‌ ಸೇರಿದಂತೆ ಎವಿಕೆ ಕಾಲೇಜು, ಡಿಆರ್ ಆರ್ ಕಾಲೇಜು, ಡಿಆರ್ ಎಂ ಕಾಲೇಜು, ಎಆರ್ ಎಂ ಕಾಲೇಜು, ಮೋತಿ ವೀರಪ್ಪ ಕಾಲೇಜು, ಎಂಎಸ್ ಬಿ ಕಾಲೇಜು, ಬಿಎಸ್ ಚನ್ನಬಸಪ್ಪ ಕಾಲೇಜು, ಐಟಿಐ ವಿದ್ಯಾರ್ಥಿಗಳು,ಸಾಮಾಜಿಕ ಕಾರ್ಯಕರ್ತ ಎಸ್‌. ರಂಗಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ‘ನಿಮಗೆ ಬಸ್‌ ವ್ಯವಸ್ಥೆ ಕೂಡಲೇ ಮಾಡುವ ಜವಾಬ್ದಾರಿ ನನ್ನದು. ನೀವೆಲ್ಲ ಓದಿ ಉತ್ತಮ ಸ್ಥಾನಕ್ಕೆ ಏರಬೇಕು’ ಎಂದು ತಿಳಿಸಿದರು.

ಕೂಡಲೇ ಬಸ್‌ ವ್ಯವಸ್ಥೆ ಮಾಡುವಂತೆ ಬಳಿಕ ನಡೆದ ಜನಸ್ಪಂದನ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಸಿದ್ದೇಶ್ವರ್‌ ಹೆಬ್ಬಾಳ್‌ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ‘ಫೆ.19ರಿಂದಲೇ ಬಸ್‌ ಓಡಲಿದೆ’ ಎಂದು ಸಿದ್ದೇಶ್ವರ್‌ ಹೆಬ್ಬಾಳ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.