ADVERTISEMENT

ವಿಷ ಸೇವಿಸಿ ಉಪಗುತ್ತಿಗೆದಾರ ಸಾವು

ಶವವಿಟ್ಟು ಇಂದು ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:53 IST
Last Updated 19 ಫೆಬ್ರುವರಿ 2020, 11:53 IST

ಸಾಸ್ವೆಹಳ್ಳಿ (ದಾವಣಗೆರೆ): ಬಾಕಿ ಹಣ ನೀಡಲು ಆಗುವುದಿಲ್ಲ ಎಂದು ಮಾಲೀಕರು ಹೇಳಿದ ಹಿನ್ನೆಲೆಯಲ್ಲಿ ಮನನೊಂದ ಉಪ ಗುತ್ತಿಗೆದಾರರೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸಹಳ್ಳಿ ಫಸ್ಟ್‌ ಕ್ಯಾಂಪ್ ನಿವಾಸಿ ಶ್ರೀನಿವಾಸ್ (50) ಮೃತಪಟ್ಟವರು.

ಕ್ಯಾಸಿನಕೆರೆ ಹೊರವಲಯದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ನಿರ್ವಹಿಸುತ್ತಿರುವ ಹೈದರಬಾದ್ ಮೂಲದ ಜಿ. ವೀರಪ್ರತಾಪ ರೆಡ್ಡಿ ಕಂಪನಿಯವರು ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ 70 ಉಪಗುತ್ತಿಗೆದಾರರು 7 ತಿಂಗಳಿನಿಂದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು.

ADVERTISEMENT

ಮಂಗಳವಾರ ಸಂಜೆ ಸ್ಥಳಕ್ಕೆ ಬಂದ ಕಂಪೆನಿಯ ಮ್ಯಾನೇಜರ್ ಬಾಕಿ ಹಣ ನೀಡಲಾಗುವುದಿಲ್ಲ ಎಂದು ಹೇಳಿದರು. ಇದರಿಂದ ಬೇಸತ್ತ ಶ್ರೀನಿವಾಸ್ ವಿಷ ಕುಡಿದು ಅಸ್ವಸ್ಥಗೊಂಡರು. ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.

ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕ್ಯಾಸಿನಕೆರೆಯಲ್ಲಿರುವ ಕಚೇರಿ ಎದುರು ಶವವನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಉಪಗುತ್ತಿಗೆದಾರರಾದ ಶಿವಕುಮಾರ್ ಕಮ್ಮಾರಗಟ್ಟೆ ಹಾಗೂ ಬಸವರಾಜ್ ಕಕ್ಕರಗೊಳ್ಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.