ದಾವಣಗೆರೆ: ಸಾಮಾನ್ಯವಾಗಿ ಯಾವುದಾದರೂ ಎಲ್ಲಿಯಾದರೂ ಆನಾಹುತ ಸಂಭವಿಸಿದರೆ ಅಗ್ನಿಶಾಮಕ ದಳಕ್ಕೆ ಫೋನ್ ಮಾಡುತ್ತೇವೆ. ಆದರೆ ಅದು ಇಲ್ಲದೆಯೇ ಬೆಂಕಿಯನ್ನು ನಂದಿಸುವ ಒಂದು ಪ್ರಾಜೆಕ್ಟ್ ಅನ್ನು ಶ್ರೀ ಮಲ್ಲಿಕಾರ್ಜುನ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.
ಕಾಲೇಜಿನ 2018–19ನೇ ಸಾಲಿನ ಶೈಕ್ಷಣಿಕ ವರ್ಷದ 15ನೇ ವಾರ್ಷಿಕ ಸಮಾರಂಭ ಹಾಗೂ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಇಂತಹದ್ದೊಂದು ಮಾದರಿಯನ್ನು ಪ್ರದರ್ಶಿಸಿದ್ದಾರೆ.
‘ಫೈರ್ ಡಿಟೆಕ್ಟರ್ ವಿತ್ ಆಟೊ ವಾಟರ್ ಸಪ್ಲೇ’ ಹೆಸರಿನಲ್ಲಿ ತಯಾರಿಸಿರುವ ಈ ಮಾದರಿಯಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣ ಅಲಾರಂ ಮೊಳಗುತ್ತದೆ. ತಕ್ಷಣ ಮೋಟರ್ ಪಂಪ್ನಿಂದ ನೀರು ಬಂದು ಬೆಂಕಿಯನ್ನು ನಂದಿಸುತ್ತದೆ ಎಂಬುದು ಇದನ್ನು ತಯಾರಿಸಿದ ವಿದ್ಯಾರ್ಥಿ ಚಿನ್ಮಹೇಶ್ ಹೇಳಿಕೆ.
ವಿದ್ಯಾರ್ಥಿ ಮನೋಜ್ ಜೋಡಿಸಿದ್ದ ಬಜಾಜ್ ಕೆಬಿ 100 ಸಿಸಿ ಬೈಕ್ ಆಕರ್ಷಣಿಯವಾಗಿತ್ತು. 1987 ಮಾಡೆಲ್ನ ಈ ಬೈಕ್ ಅನ್ನು ಮರು ಜೋಡಣೆ ಮಾಡಿ, ಬಣ್ಣ ಬಳಿದು ತುಂಬಾ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ.
‘6500 ಖರ್ಚು ಮಾಡಿ ಈ ಬೈಕ್ ತಯಾರಿಸಿದ್ದೇನೆ. ಓಲ್ಡ್ ಈಸ್ ಗೋಲ್ಡ್ ಎನ್ನುವಂತೆ ಎಲ್ಲರೂ ಇದನ್ನು ತುಂಬಾ ಇಷ್ಟಪಟ್ಟರು. 40 ಕಿ.ಮೀ ಮೈಲೇಜ್ ನೀಡುತ್ತದೆ’ ಎನ್ನುತ್ತಾರೆ ಮನೋಜ್.
‘ಆಟೊಮ್ಯಾಟಿಕ್ ಸ್ಟ್ರೀಟ್ ಲೈಟ್ ಕಂಟ್ರೋಲರ್’ ಪ್ರಾಜೆಕ್ಟ್ ವಿದ್ಯುತ್ ಉಳಿತಾಯದ ಪಾಠವನ್ನು ಹೇಳುವಂತಿತ್ತು. ‘ ರಾತ್ರಿ ವೇಳೆ ಆಗುತ್ತಿದ್ದಂತೆ ಬಲ್ಬ್ ಹೊತ್ತಿಕೊಂಡು ಬೆಳಿಗ್ಗೆ ಆಫ್ ಆಗುವುದು. ಅಪಘಾತ ತಪ್ಪಿಸುವುದು ಇದರ ಉದ್ದೇಶ’ ಎನ್ನುವುದು ಪ್ರಾಜೆಕ್ಟ್ ತಯಾರಿಸಿದ ಮಾರುತಿ ಅಭಿಪ್ರಾಯ.
‘ವೈರ್ಲೆಸ್ ಕಂಟ್ರೋಲರ್ ಹೋಮ್ ಅಪ್ಲೈಯನ್ಸ್ ಯೂಸಿಂಗ್ ಬ್ಲೂಟೂತ್ ಕಂಟ್ರೋಲರ್’ ಪ್ರಾಜೆಕ್ಟ್ನಲ್ಲಿ ಮನೆಯ ಯಾವುದೇ ಭಾಗದಲ್ಲಿ ಕುಳಿತು ವಿದ್ಯುತ್ ಬಲ್ಬ್ಗಳು, ಟಿವಿ, ವಾಷಿಂಗ್ ಮೆಷಿನ್, ಎಸಿ ಎಲ್ಲವನ್ನೂ ಆನ್ ಅಂಡ್ ಆಫ್ ಮಾಡುವುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟರು.
‘ಸಿಂಪಲ್ ವಾಟರ್ ಲೆವಲ್ ಕಂಟ್ರೋಲರ್’ನಲ್ಲಿ ನೀರಿನ ಉಳಿತಾಯ ಮಾಡುವುದು ಹೇಗೆ ಎಂಬುದನ್ನು ವಿವರಿಸುತ್ತಿತ್ತು. ಉಳಿದಂತೆ ಮೆಟಾಲಿಕ್ ಕ್ಲಾಕ್, ರೂಮ್ ಬೋರ್ಡ್, ವೆಜಿಟೆಬಲ್ ಕಟ್ಟರ್, ವೆಲ್ಡಿಂಗ್ ಫಿಕ್ಚರ್, ಪಿನ್ ಅಂಡ್ ಬ್ಲೈಂಡ್ ಹೋಲ್ ಮೆಕ್ಯಾನಿಸಂ, ಮಾಡೆಲ್ ಆಫ್ ರೇಡಿಯೇಟರ್ ಪ್ರಾಜೆಕ್ಟ್ಗಳು ಗಮನ ಸೆಳೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.