ADVERTISEMENT

ಇಂದಿನಿಂದ ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಮುಕ್ತ

ನಿಯಮ ಪಾಲಿಸುವಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 7:08 IST
Last Updated 5 ಜುಲೈ 2021, 7:08 IST
ಉಚ್ಚಂಗಿದುರ್ಗ ಉಚ್ಚೆಂಗೆಮ್ಮ ದೇವಸ್ಥಾನವನ್ನು ಮುಜಾರಾಯಿ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದರು.
ಉಚ್ಚಂಗಿದುರ್ಗ ಉಚ್ಚೆಂಗೆಮ್ಮ ದೇವಸ್ಥಾನವನ್ನು ಮುಜಾರಾಯಿ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದರು.   

ಉಚ್ಚಂಗಿದುರ್ಗ: ಗ್ರಾಮದ ಐತಿಹಾಸಿಕ ಉಚ್ಚೆಂಗೆಮ್ಮ ದೇವಿ ದೇವಾಲಯವು ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ಕೋವಿಡ್‌ 2ನೇ ಅಲೆ ನಿಯಂತ್ರಣದ ಕಾರಣ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಎರಡು ತಿಂಗಳುಗಳ ಬಳಿಕ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ.

ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ದೇವಾಲಯಗಳನ್ನು ಭಕ್ತರ ಪ್ರವೇಶಕ್ಕೆ ತೆರೆಯಲು ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮುಜಾರಾಯಿ ಇಲಾಖೆ ಸಿಬ್ಬಂದಿ ಭಾನುವಾರ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

ಭಕ್ತರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆಯ ಕುರಿತು ಜಾಗೃತಿ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ.

‘ದೇವಸ್ಥಾನದಲ್ಲಿ ದಾಸೋಹದ ವ್ಯವಸ್ಥೆ, ಭಕ್ತರಿಗೆ ತೀರ್ಥ ಪ್ರಸಾದ ಸೇವೆ, ಹುಣ್ಣಿಮೆ, ಉತ್ಸವಗಳು ನಡೆಯುವುದಿಲ್ಲ. ದೇವಸ್ಥಾನಕ್ಕೆ ಬರುವ ದಾರಿಯಲ್ಲಿ ಹೂವು, ಹಣ್ಣುಕಾಯಿಗಳನ್ನು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉಚ್ಚೆಂಗೆಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.